ಬೆಂಗಳೂರು: ಕೊರೊನಾ ವಿರುದ್ಧ ಯುದ್ಧದಲ್ಲಿ ಗೆಲ್ಲಬೇಕೆಂದು ಆರೋಗ್ಯ ಇಲಾಖೆ ಮತ್ತು ಗೃಹ ಇಲಾಖೆ ಟೊಂಕ ಕಟ್ಟಿ ನಿಂತಿದೆ. ಹೀಗಾಗಿ ಹಗಲಿರುಳು ಕೆಲಸದಲ್ಲಿ ಎರಡು ಇಲಾಖೆಯ ಸಿಬ್ಬಂದಿ ನಿರತರಾಗಿದ್ದಾರೆ. ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರತಾಪಗೌಡ ಪಾಟೀಲ್ ಅವರು ತಮ್ಮ ಪುಟ್ಟ ಮಗುವಿನ ಮುಖ ನೋಡಲು ಕಾಯುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದರಿಂದ ಊರಿಗೆ ತೆರಳಿ ಮುದ್ದು ಕಂದನ ಮುಖ ನೋಡಲು ಆಗುತ್ತಿಲ್ಲ.
ಪಿಎಸ್ಐ ಪ್ರತಾಪಗೌಡ ಪಾಟೀಲ್ 11 ದಿನಗಳ ಹಿಂದಷ್ಟೇ ಎರಡನೇ ಮಗುವಿಗೆ ತಂದೆಯಾಗಿದ್ದರು. ಎಂಟು ವರ್ಷಗಳ ಬಳಿಕ ಎರಡನೇ ಮಗು ಆಗಿದ್ದರಿಂದ ಸಂತಸದಲ್ಲಿದ್ದರು. ತನ್ನ ಪುಟ್ಟ ಪಾಪುವನ್ನ ಒಮ್ಮೆಯಷ್ಟೆ ನೋಡಿ ಕಣ್ತುಂಬಿಕೊಂಡಿದ್ದರು. ಮಗು ಜನಿಸಿದ ಎರಡೇ ದಿನಕ್ಕೆ ಸರ್ಕಾರ ಲಾಕ್ಡೌನ್ ಆದೇಶ ಜಾರಿಗೊಳಿಸಿತ್ತು. ಇನ್ನು ಕೆಲಸ ಮುಗಿಸಿ ಮನೆಗೆ ಹೋದ್ರೆ ಮುದ್ದು ಕಂದಮ್ಮನನ್ನು ಎತ್ತಿ ಮುದ್ದಾಡಬೇಕೆಂದು ಅನ್ನಿಸುತ್ತದೆ.
ಹೀಗಾಗಿ ಮಗುವಿನ ಆರೋಗ್ಯದ ಬಗ್ಗೆ ಆತಂಕಗೊಂಡ ಪ್ರತಾಪ್ ಗೌಡ, ಪತ್ನಿ ಹಾಗೂ ಮಕ್ಕಳನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್ ಗೆ ಕಳುಹಿಸಿದ್ದಾರೆ. ಸಾರ್ವಜನಿಕರ ರಕ್ಷಣೆಗಾಗಿ ಮನೆ ಮಠ, ಮಡದಿ ಮಕ್ಕಳನ್ನ ತೊರೆದು ಇಡೀ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ತನ್ನ ಪುಟ್ಟ ಕಂದನ ಜೊತೆ ಕಾಲ ಕಳೆಯೋ ಆಸೆ ಇದ್ದರೂ ಜನರ ಸೇವೆಗಾಗಿ ನಿಂತಿದ್ದಾರೆ.