ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಭೀತಿಯ ಬಳಿಕ ನಗರದಲ್ಲಿ ಗಂಡ-ಹೆಂಡತಿ ಜಗಳ ಜಾಸ್ತಿಯಾಗಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಬಂದ ಮೇಲೆ ಕ್ರೈಂ ರೇಟ್ ಕಡಿಮೆಯಾಗಿದೆ. ಕೊಲೆ ಸುಲಿಗೆ ಪ್ರಕರಣಗಳು ಕಡಿಮೆ ಆಗಿವೆ. ಆದರೆ ರಸ್ತೆ ಅಪಘಾತ ಜಾಸ್ತಿಯಾಗಿದೆ. ರಸ್ತೆ ಖಾಲಿ ಇರುವುದರಿಂದ ರಸ್ತೆ ಅಪಘಾತ ಆಗುತ್ತಿದೆ. ಅಲ್ಲದೆ ಡೊಮೆಸ್ಟಿಕ್ ವೈಲೆನ್ಸ್ (ಗಂಡ-ಹೆಂಡತಿ ಜಗಳ) ಕೂಡ ಜಾಸ್ತಿಯಾಗಿದೆ. ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ ಎಂದು ಆಯುಕ್ತರು ತಿಳಿಸಿದರು.
ನಾಳೆಯ ಬಗ್ಗೆ ಜನರಿಗೆ ಮನವಿ ಮತ್ತು ಒತ್ತಾಯ ಮಾಡಲಾಗುತ್ತಿದೆ. ಈ ವಿಚಾರವನ್ನು ಯಾರೂ ಲಘುವಾಗಿ ಪರಿಗಣಿಸಬೇಡಿ. ಲಘುವಾಗಿ ಪರಿಗಣಿಸಿದರೆ ಪ್ರಕರಣ ದಾಖಲು ಮಾಡಲಾಗುತ್ತದೆ. ಐಪಿಸಿ ಸೆಕ್ಷನ್ ಒಳಗೆ ನಮಗೆ ಅವಕಾಶ ಇದೆ. ಹೀಗಾಗಿ ಒತ್ತಾಯ ಪೂರಕವಾಗಿ ಹೇಳುತ್ತೇವೆ ಎಂದು ತಿಳಿಸಿದರು.
ಕೊರೊನಾ ವಿರುದ್ಧ ಹೋರಾಡಲು ಎಲ್ಲರೂ ಕೈ ಜೋಡಿಸಬೇಕು. ಬ್ಯಾರಿಕೇಡ್ ಹಾಕ್ತೀವಿ. ಹೊರಗೆ ಬರುವವರಿಗೆ ಒಳಗೆ ಹೋಗೋಕೆ ಹೇಳ್ತೀವಿ. ಹೀಗಾಗಿ ಕೇಳದೆ ಇದ್ದರೆ ಪ್ರಕರಣ ದಾಖಲು ಮಾಡಲಾಗುತ್ತಿದೆ ಎಂದು ಹೇಳಿದರು.