ಭೂಗತ ಪಾತಕಿ ಹೆಸರಲ್ಲಿ ರೋಲ್ ಕಾಲ್- ಇಬ್ಬರ ಬಂಧನ

Public TV
1 Min Read
UDP HAPTHA

ಉಡುಪಿ: ಹಣಕ್ಕಾಗಿ ಬಿಲ್ಡರ್ ಗೆ ಬೆದರಿಕೆ ಒಡ್ಡಿದ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಸಿನಿಮೀಯ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಧನರಾಜ್ ಕಟಪಾಡಿ (23) ಹಾಗೂ ಉಲ್ಲಾಸ್ ಮಲ್ಪೆ (25) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಕಳೆದ ಒಂದು ವಾರದಿಂದ ಪುತ್ತೂರು ಪಟ್ಟಣ ವಾಸುಕಿ ನಗರದ ನಿವಾಸಿ ಅಂಬಾಗಿಲು ಕ್ಲಾಸಿಕ್ ಬಿಲ್ಡರ್ ಆದ ಪ್ರಭಾಕರ ಪೂಜಾರಿಯವರಿಗೆ ಮೊದಲು ಕರೆ ಮಾಡಿ ವ್ಯವಹಾರದ ಬಗ್ಗೆ ಮಾತನಾಡಲು ಸಿಗುವಂತೆ ಹೇಳಿದ್ದಾರೆ. ಆದರೆ ದಿನ ಕಳೆದಂತೆ ಬಿಲ್ಡರ್ ಗೆ ಹಣದ ಬೇಡಿಕೆ ಇಡಲು ಶುರುಮಾಡಿ, ಸೋಮವಾರ ಮಲ್ಪೆಯಲ್ಲಿ ಸಿಗುವಂತೆ ಎಚ್ಚರಿಸಿದ್ದರು.

ಆರೋಪಿಗಳು ಬಿಲ್ಡರ್ ಗೆ ಕರೆ ಮಾಡಿ ನೀನು ಬನ್ನಂಜೆ ರಾಜಾನ ಹೆಸರಿನಲ್ಲಿ ಹಣ ಮಾಡುತ್ತಿದ್ದಿಯಾ. ಆ ಹಣದಲ್ಲಿ ನಮಗೆ 25 ಲಕ್ಷ ರೂ. ಕೊಡಬೇಕೆಂದು ಬೆದರಿಕೆ ಹಾಕಿದ್ದರು. ಈ ಕುರಿತು ಪ್ರಭಾಕರ ಪೂಜಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಸೂಚನೆಯಂತೆ ಪೂಜಾರಿ ಸೋಮವಾರ ಸಂಜೆ 5.30 ಕ್ಕೆ ಮಲ್ಪೆಯಲ್ಲಿ ಭೇಟಿಯಾಗಲು ತೆರಳಿದ್ದರು. ಈ ವೇಳೆ ಆರೋಪಿಗಳು ಪ್ರಭಾಕರ್ ಜತೆ ಖಾಸಗಿ ಹೋಟೆಲ್‍ವೊಂದರ ಮುಂಭಾಗ ನಿಂತು ಮಾತನಾಡುತ್ತಿದ್ದಾಗ, ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಒಂದು ಕಾರು ಹಾಗೂ 6 ಮೊಬೈಲ್ ಗಳನ್ನು ವಶಪಡಿಸಕೊಂಡಿದ್ದು, ಆರೋಪಿಗಳು ರೌಡಿ ವಿಕ್ಕಿ ಪೂಜಾರಿಯ ಬಂಟರೆಂದು ತಿಳಿಸಿದ್ದಾರೆ. ಘಟನೆ ಸಂಬಂಧ ಆರೋಪಿಗಳ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *