15 ವರ್ಷ ಏರೋಸ್ಪೇಸ್‌ನಲ್ಲಿ ತಯಾರಾಗಿದ್ದ ರಕ್ಷಣಾ ಸಾಮಾಗ್ರಿಗಳ 5 ಪಟ್ಟು ಕಳೆದ 8 ವರ್ಷಗಳಲ್ಲಿ ತಯಾರಾಗಿದೆ: ಮೋದಿ

Public TV
3 Min Read
PM Narendra Modi inaugurates HALs Helicopter Factory in Tumakuru unveils Light Utility Helicopter

ತುಮಕೂರು: ಡಬಲ್ ಇಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಹೆಲಿಕಾಪ್ಟರ್ (Helicopter) ಉತ್ಪಾದನಾ ಘಟಕವೂ ಒಂದು ನಿದರ್ಶನ. 15 ವರ್ಷ ಏರೋಸ್ಪೇಸ್‌ನಲ್ಲಿ ತಯಾರಾಗಿದ್ದ ರಕ್ಷಣಾ ಸಾಮಾಗ್ರಿಗಳ ಐದು ಪಟ್ಟು ಸಾಮಾಗ್ರಿಗಳು ಕಳೆದ ಎಂಟು ವರ್ಷಗಳಲ್ಲಿ ತಯಾರಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ಗುಬ್ಬಿ ತಾಲೂಕಿನ ಬಿದರಹಳ್ಳ ಕಾವಲ್‌ನಲ್ಲಿ ತಲೆ ಎತ್ತಿರುವ ಎಷ್ಯಾ ಅತಿ ದೊಡ್ಡ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (HAL) ಹೆಲಿಕಾಪ್ಟರ್‌ ನಿರ್ಮಾಣ ಘಟಕವನ್ನು ಲೋಕಾರ್ಪಣೆ ಮಾಡಿ ಮೋದಿ ಮಾತನಾಡಿದರು.

2014ಕ್ಕೂ ಮೊದಲು ಹೇಗಿತ್ತು ಅಂತ ನೆನಪಿದೆಯಾ? 2014ಕ್ಕೂ ಮುಂಚಿನ 15 ವರ್ಷ ಏರೋಸ್ಪೇಸ್‌ನಲ್ಲಿ ತಯಾರಾಗಿದ್ದ ರಕ್ಷಣಾ ಸಾಮಾಗ್ರಿಗಳ ಐದು ಪಟ್ಟು ಕಳೆದ ಎಂಟು ವರ್ಷಗಳಲ್ಲಿ ತಯಾರಾಗಿದೆ. ಈ ಎಚ್‌ಎಎಲ್‌ ಘಟಕದಲ್ಲಿ ಯುದ್ಧ ಹೆಲಿಕಾಪ್ಟರ್‌ಗಳ ತಯಾರಿಕೆಯೂ ಆಗಲಿದೆ. ನಮ್ಮ ಸೇನೆಗೆ ಮತ್ತಷ್ಟು ಬಲವನ್ನು ಈ ಘಟಕ ತುಂಬಲಿದೆ ಎಂದು ಸರ್ಕಾರದ ಸಾಧನೆಯನ್ನು ಕೊಂಡಾಡಿದರು.

ಖಾಸಗಿ ವಲಯಕ್ಕೂ ರಕ್ಷಣಾ ವಲಯದಲ್ಲಿ ಅವಕಾಶ ಕೊಡಲಾಗಿದೆ. ಇದನ್ನು ನೆಪ ಮಾಡಿ ನಮ್ಮ ಸರ್ಕಾರದ ಮೇಲೆ ತರಹೇವಾರಿ ಆರೋಪ ಮಾಡಲಾಯಿತು. ಇದೇ ಎಚ್‌ಎಎಲ್ ನೆಪ ಮಾಡಿ ಜನರಿಗೆ ಸುಳ್ಳು ಹೇಳಲಾಯಿತು. ಸುಳ್ಳು ಎಷ್ಟೇ ಪ್ರಬಲವಾಗಿದ್ದರೂ ಎಷ್ಟು ಜನಕ್ಕೆ ಹೇಳಿದರೂ ಒಂದು ದಿನ ಸುಳ್ಳು ಸತ್ಯದ ಎದುರು ಸೋಲಲೇಬೇಕು. ಇಂದು ಎಚ್‌ಎಎಲ್‌ನ ಶಕ್ತಿ ವೃದ್ಧಿಯಿಂದ ಸುಳ್ಳುಕೋರರ ವೇಷ ಕಳಚಿದೆ. ಭಾರತೀಯ ಸೇನೆಗೆ ಎಚ್‌ಎಎಲ್ ಆಧುನಿಕ ತೇಜಸ್ ತಯಾರಿಸುತ್ತಿದೆ. ರಕ್ಷಣಾ ವಲಯದಲ್ಲಿ ಎಚ್ಎಎಲ್ ಭಾರತದ ಆತ್ಮ ನಿರ್ಭರಕ್ಕೆ ಬಲ ಕೊಡುತ್ತಿದೆ ಎಂದರು.

ಕರ್ನಾಟಕ (Karnataka) ಯುವ ಟ್ಯಾಲೆಂಟ್‌, ಯುವ ಅನ್ವೇಷಣೆಯ ನೆಲ. ಡ್ರೋನ್‌ನಿಂದ ನಿಂದ ತೇಜಸ್ ನಿರ್ಮಾಣದವರೆಗೆ ರಾಜ್ಯದ ಪ್ರತಿಭೆಯನ್ನು ಜಗತ್ತು ನೋಡುತ್ತಿದೆ. ಡಬಲ್ ಇಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಹೆಲಿಕಾಪ್ಟರ್ ಉತ್ಪಾದನಾ ಘಟಕವೂ ಒಂದು ನಿದರ್ಶನ. ಈ ಘಟಕದ ಶಿಲಾನ್ಯಾಸ ಮಾಡುವ ಸೌಭಾಗ್ಯ ನನ್ನದಾಗಿತ್ತು. ಹೆಲಿಕಾಪ್ಟರ್‌, ಯುದ್ಧ ನೌಕೆ, ಯುದ್ಧ ವಿಮಾನ ಸೇರಿದಂತೆ ಹಲವಷ್ಟು ರಕ್ಷಣಾ ಸಾಮಾಗ್ರಿಗಳು ಭಾರತದಲ್ಲೇ ತಯಾರಾಗುತ್ತಿದ್ದು ಈಗ ಡಬಲ್‌ ಎಂಜಿನ್‌ ಸರ್ಕಾರದ ಅವಧಿಯಲ್ಲಿ ಉದ್ಘಾಟನೆ ಮಾಡಲಾಗಿದೆ ಎಂದು ಹೇಳಿದರು.

ಶಂಕುಸ್ಥಾಪನೆಗೊಂಡ ತುಮಕೂರು ಕೈಗಾರಿಕಾ ಟೌನ್ ಶಿಪ್ (Tumakuru Industrial Township) ಉದ್ಯೋಗಗಳ ಬಾಗಿಲು ತೆರೆಯಲಿದೆ. ಟೌನ್ ಶಿಪ್‌ ನಿರ್ಮಾಣ ಪಿಎಂ ಗತಿ ಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲಾನ್ ಪ್ರಕಾರ ಆಗುತ್ತಿದೆ. ಈ ಟೌನ್ ಶಿಪ್‌ಗೆ ಮಲ್ಟಿ ಮೋಡಲ್ ಕನೆಕ್ಟಿವಿಟಿ ಮಾಡಲಾಗುತ್ತಿದೆ. ಡಬಲ್‌ ಎಂಜಿನ್‌ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ಭೌತಿಕ ಮೂಲಸೌಕರ್ಯದಷ್ಟೇ ಸಾಮಾಜಿಕ ಮೂಲಸೌಕರ್ಯ ಒದಗಿಸಲು ನಾವು ಬದ್ಧರಾಗಿದ್ದೇವೆ. ಕೃಷಿ ನೀರಾವರಿ, ಮನೆಗಳಿಗೆ ನೀರು ಸಂಪರ್ಕ ಜಲಜೀವನಮಿಷನ್ ಯೋಜನೆಗೆ ಈ ಬಜೆಟ್ ನಲ್ಲಿ 20 ಸಾವಿರ ಕೋಟಿ ಹೆಚ್ಚುವರಿ ಅನುದಾನ ಕೊಡಲಾಗಿದೆ. ಮನೆಗಳಿಗೆ ನೀರು ಸಿಗುವ ಮೂಲಕ ಬಡ ಮಹಿಳೆಯರಿಗೆ ಅನುಕೂಲವಾಗಲಿದೆ. ನೀರಿಗಾಗಿ ಕಿಲೋಮೀಟರ್‌ಗಟ್ಟಲೇ ನಡೆಯುವುದು ತಪ್ಪಲಿದೆ. ದೇಶದಲ್ಲಿ 11 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕೊಡಲಾಗಿದೆ ಎಂದು ವಿವರಿಸಿದರು.

ಭದ್ರಾ ಮೇಲ್ಡಂಡೆ ಯೋಜನೆಯನ್ನು (Upper Bhadra Project) ಪ್ರಸ್ತಾಪಿಸಿದ ಮೋದಿ, ಕೃಷಿ ನೀರಾವರಿಗೆ ಆದ್ಯತೆ ನೀಡಲಾಗಿದ್ದು ಈ ಬಾರಿಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ 5,300 ಕೋಟಿ ರೂ ಅನುದಾನ ಕೊಡಲಾಗಿದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಇದರಿಂದ ಸಿಗಲಿದೆ. ಸಣ್ಣ ರೈತರ ಕೃಷಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಬಜೆಟ್‌ನಲ್ಲಿ(Budget) ಸಹಕಾರ ವಲಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕಬ್ಬು ಬೆಳೆಗಾರರಿಗೂ ಬಜೆಟ್ ನಿಂದ ಅನುಕೂಲ. ಕರ್ನಾಟಕದಲ್ಲಿ ಸಿರಿಧಾನ್ಯಗಳ ಮಹತ್ವ ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗಳಿಗೆ ಪ್ರೋತ್ಸಾಹ ಕೊಡಲಾಗಿದೆ. ಕರ್ನಾಟಕದ ರಾಗಿಮುದ್ದೆ, ರಾಗಿ ರೊಟ್ಟಿ ಮರೆಯಲು ಸಾಧ್ಯವೇ ಇಲ್ಲ. ಸಿರಿಧಾನ್ಯ ಬೆಳೆಗಳಿಂದ ಸಣ್ಣ ರೈತರಿಗೆ ಅನುಕೂಲವಾಗಿದ್ದು ಡಬಲ್ ಇಂಜಿನ್ ಸರ್ಕಾರದ ಪ್ರಾಮಾಣಿಕ ಪ್ರಯತ್ನಗಳಿಂದ ಜನರ ವಿಶ್ವಾಸ ಹೆಚ್ಚಾಗಿದೆ ಎಂದು ತಿಳಿಸದರು.

ಈ ಮೊದಲು ತಳಮಟ್ಟದ ವರೆಗೂ ಸರ್ಕಾರಿ ಯೋಜನೆಗಳು ಸಿಗುತ್ತಿರಲಿಲ್ಲ. ನಾವು ಸಮಾಜದ ಕಟ್ಟಕಟೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಲಾಭ ಮುಟ್ಟುವಂತೆ ನಿಗಾ ಇಟ್ಟಿದ್ದೇವೆ. ನಮ್ಮ ಅವಧಿಯಲ್ಲಿ ಸರ್ಕಾರದ ಎಲ್ಲ ಯೋಜನೆಗಳ ಲಾಭ ಎಲ್ಲರಿಗೂ ಸಿಗುತ್ತಿದೆ. ವಿಶ್ವಕರ್ಮ ಸಮುದಾಯದ ಸಹೋದರ ಸೋದರಿಯರಿಗೂ ಮೊದಲ ಸಲ ವಿಶೇಷ ಕಾರ್ಯಕ್ರಮ ತಂದಿದ್ದೇವೆ. ಕುಂಬಾರ, ಕಮ್ಮಾರ, ಅಕ್ಕಸಾಲಿಗ, ಶಿಲ್ಪಿ, ಬಡಗಿ, ಗಾರೆ ಕೆಲಸದವರಿಗೆ ಪಿಎಂ ಆವಾಸ್ ಯೋಜನೆಯಡಿ ನೆರವು. ಈ ವೃತ್ತಿ ಸಮುದಾಯಗಳ ಕೌಶಲ್ಯ ಹೆಚ್ಚಳಕ್ಕೂ ನೆರವು ಕೊಡಲಾಗಿದೆ. ಕೇಂದ್ರ ಬಜೆಟ್ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಕೊಟ್ಟಿದ್ದು, ಸಮರ್ಥ ಭಾರತ, ಶಕ್ತಿಯುತ ಭಾರತ ನಿರ್ಮಾಣಕ್ಕೆ ಈ ಬಜೆಟ್ ಪೂರಕವಾಗಿದೆ ಎಂದು ಕೊಂಡಾಡಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *