ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿಯವರ ಒಂದು ಫೋನ್ ಕರೆಗೆ ಸ್ಪಂದಿಸಿದ ಸೌದಿ ದೊರೆ, 2015 ರಲ್ಲಿ ಯೆಮನ್ ಮೇಲಿನ ಬಾಂಬ್ ದಾಳಿ ನಿಲ್ಲಿಸಿದ್ದರು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಹೇಳಿದ್ದಾರೆ.
ಆಸಿಯಾನ್ ಪ್ರವಾಸಿ ಭಾರತೀಯರ ದಿನಾಚರಣೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಈ ಕುರಿತು ಮಾಹಿತಿ ನೀಡಿದರು. ಯೆಮನ್ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳನ್ನು ರಕ್ಷಿಸಲು ಕೈಗೊಂಡಿದ್ದ ಆಪರೇಷನ್ `ರಹಾತ್’ ಗೆ ಸೌದಿ ದೊರೆ ಸಹಕಾರ ನೀಡಿದ್ದರು ಎಂದು ತಿಳಿಸಿದ್ದಾರೆ.
ಯೆಮನ್ ನಲ್ಲಿದ್ದ 4000ಕ್ಕೂ ಹೆಚ್ಚು ಭಾರತೀಯರು ಸಂಕಷ್ಟದಲ್ಲಿ ಸಿಕ್ಕಿದ್ದರು. 2015 ಏಪ್ರಿಲ್ 1 ರಂದು ಆಪರೇಷನ್ ರಹಾತ್ ಎಂಬ ಹೆಸರಿನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿತ್ತು.
ಈ ವೇಳೆ ಸೌದಿ ಯೆಮನ್ ನಲ್ಲಿ ಉಗ್ರರ ವಿರುದ್ಧ ಬಾಂಬ್ ದಾಳಿ ನಡೆಸುತ್ತಿತ್ತು. ಸುಷ್ಮಾ ಅವರ ಸಲಹೆಯಂತೆ ಮೋದಿ ಭಾರತೀಯರ ರಕ್ಷಣೆಗೆ ಕಾರ್ಯಾಚರಣೆ ನಡೆಸಲು ಅನುವಾಗುವಂತೆ ಬಾಂಬ್ ದಾಳಿ ಸ್ಥಗಿತಕ್ಕೆ ಸೌದಿ ದೊರೆಯನ್ನು ಕೋರಿದ್ದರು.
ಈ ಮನವಿಗೆ ಪ್ರತಿಕ್ರಿಯಿಸಿದ್ದ ಸೌದಿ ದೊರೆ, ಪ್ರಧಾನಿ ಮೋದಿಯವರೊಂದಿಗಿನ ಸ್ನೇಹಕ್ಕೆ ಅವರ ಮನವಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಆದರೆ ಬಾಂಬ್ ದಾಳಿಯನ್ನೂ ಪೂರ್ಣ ನಿಲ್ಲಿಸಲಾಗದು. ಭಾರತೀಯರ ಸುರಕ್ಷಿತ ತೆರವಿಗಾಗಿ ಪ್ರತಿನಿತ್ಯ ಎರಡು ಘಂಟೆಗಳ ಕಾಲ ಬೆಳಗ್ಗೆ 9 ರಿಂದ 11 ರ ವರೆಗೆ ಬಾಂಬ್ ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಸುಷ್ಮಾ ಸ್ವರಾಜ್ ಘಟನೆಯನ್ನು ವಿವರಿಸಿದರು.
ಸೌದಿ ದೊರೆಯ ಭರಸೆಯಂತೆ ಭಾರತೀಯ ಸೇನೆ 2015ರ ಏ.1ರಿಂದ 11 ದಿನಗಳ ಕಾಲ ಸೇನಾ ವಿಮಾನ ನಿಲ್ದಾಣದಿಂದ 4,800ಕ್ಕೂ ಹೆಚ್ಚು ಭಾರತೀಯರು ಮತ್ತು 1,972 ನೆರೆಹೊರೆಯ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ರಕ್ಷಿಸಿ ತವರಿಗೆ ಕರೆತಂದಿತ್ತು. ಈ ಕಾರ್ಯಾಚರಣೆಯನ್ನು ಭಾರತ ವಿದೇಶಾಂಗ ಸಲಹೆಗಾರ, ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಮುಂದಾಳತ್ವದಲ್ಲಿ ನಡೆಯಿತು ಎಂದು ಸುಷ್ಮಾ ಸ್ವರಾಜ್ ಹೇಳಿದರು.