ನವದೆಹಲಿ: ನವಭಾರತ ನಿರ್ಮಾಣದ ಅದಮ್ಯ ಚೈತನ್ಯದೊಂದಿಗೆ ಹೊಸಮಿಂಚಿನಂತೆ ಸಂಚಲನ ಸೃಷ್ಟಿಸಿರೋ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಇಂದಿಗೆ ಮೂರು ವರ್ಷ. ಕನಿಷ್ಠ ಸರ್ಕಾರ – ಗರಿಷ್ಠ ಆಡಳಿತ ಅಂತ ಮುಂದಿನ ಬಾರಿಯೂ ಅಧಿಕಾರ ಉಳಿಸಿಕೊಳ್ಳುವ ಉಮೇದು ಮೋದಿ ಅವ್ರದ್ದು.
ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದು ಮೋದಿ ಅಸ್ಸಾಂ ಪ್ರವಾಸದಲ್ಲಿದ್ದಾರೆ. ಬ್ರಹ್ಮಪುತ್ರ ನದಿಯ ಉಪನದಿಗೆ ಅಡ್ಡಲಾಗಿ 950 ಕೋಟಿ ರೂ. ವೆಚ್ಚದಲ್ಲಿ ಕಟ್ಟಿರೋ ದೇಶದ ಅತೀ ದೊಡ್ಡ `ಧೋಲಾ-ಸದಿಯಾ’ ಸೇತುವೆಯನ್ನ ಉದ್ಘಾಟಿಸಲಿದ್ದಾರೆ. ಈ ಮೂಲಕ ಈಶಾನ್ಯ ಭಾರತೀಯರು ಭಾರತದ ಒಂದು ಬಹುಮುಖ್ಯ ಅಂಗ. ಅವರನ್ನ ನಾವೂ ಎಂದಿಗೂ ಕಡೆಗಣಿಸಲ್ಲ ಅನ್ನೋ ಸಂದೇಶ ಸಾರಲಿದ್ದಾರೆ. ಸಿಎಂ ತರುಣ್ ಗೊಯೋಯ್ ಸಾಥ್ ನೀಡಲಿದ್ದಾರೆ.
ರಾಜ್ಯಗಳ ರಾಜಧಾನಿ ಸೇರಿದಂತೆ ಪ್ರಮುಖ 300 ನಗರಗಳಲ್ಲಿ ಇಂದಿನಿಂದ ಮೂರು ದಿನ `ಮೋದಿ ಫೆಸ್ಟ್’ ನಡೆಯಲಿದೆ. ಮೋದಿ ಹಬ್ಬದಲ್ಲಿ ಯುವಜನತೆಯನ್ನು ಆಕರ್ಷಿಸಲು ಕ್ವಿಜ್, ಡಿಬೇಟ್, ಚರ್ಚಾಕೂಟ ಏರ್ಪಡಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಎಷ್ಟು ಗ್ರಾಮಗಳು ವಿದ್ಯುದ್ದೀಕರಣವಾಗಿವೆ? 2014ರ ನಂತರ ಎಷ್ಟು ಶೌಚಾಲಯಗಳ ನಿರ್ಮಾಣವಾಗಿದೆ? ಹೀಗೆ ಸಾಕಷ್ಟು ಪ್ರಶ್ನೆ ಕೇಳಲಾಗ್ತಿದೆ.
ಇವತ್ತಿನ ತಮ್ಮ ಭಾಷಣದಲ್ಲಿ ಪ್ರಧಾನಿ ಏನೆಲ್ಲಾ ಹೇಳ್ತಾರೆ ಅನ್ನೋದು ಜನಸಾಮಾನ್ಯರ ಕುತೂಹಲವಾಗಿದೆ.