– ನಮ್ಮ ಅಥ್ಲೀಟ್ಗಳಿಂದ ಭಾರತದ ಚೈತನ್ಯ ಬೆಳಗುತ್ತಿದೆ
ಪ್ಯಾರಿಸ್/ಬೆಂಗಳೂರು: ಒಲಿಂಪಿಕ್ಸ್ನಲ್ಲಿ ನಡೆದ 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಟ್ಟ ಮನು ಭಾಕರ್, ಸರಬ್ಜೋತ್ ಸಿಂಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ದಕ್ಷಿಣ ಕೊರಿಯಾದ ಜೋಡಿಯನ್ನು ಸೋಲಿಸಿ ಭಾರತಕ್ಕೆ 2ನೇ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಈ ಕುರಿತು ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಎಕ್ಸ್ನಲ್ಲಿ ಪೋಸ್ಟ್ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಎಕ್ಸ್ನಲ್ಲಿ ಮೋದಿ ಸಂದೇಶ:
ನಾವು ಹೆಮ್ಮೆ ಪಡುವುದನ್ನು ಮುಂದುವರಿಸಿದ ನಮ್ಮ ಶೂಟರ್ಗಳಿಗೆ ಅಭಿನಂದನೆಗಳು. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಸರಬ್ಜೋತ್ ಸಿಂಗ್ ಹಾಗೂ ಮನು ಭಾಕರ್ ಇಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇಬ್ಬರೂ ಉತ್ತಮ ಕೌಶಲ್ಯ ಮತ್ತು ಟೀಮ್ ವರ್ಕ್ ತೋರಿದ್ದಾರೆ. ಭಾರತವು ನಂಬಲಾಗದಷ್ಟು ಸಂತೋಷವಾಗಿದೆ. ಮನು ಅವರಿಗೆ, ಇದು ಅವರ ಸತತ ಎರಡನೇ ಒಲಿಂಪಿಕ್ ಪದಕವಾಗಿದ್ದು, ಅವರ ಸ್ಥಿರ ಶ್ರೇಷ್ಠತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂದೇಶ:
ನಮ್ಮ ಅಥ್ಲೀಟ್ಗಳಿಂದ ಭಾರತದ ಚೈತನ್ಯ ಬೆಳಗುತ್ತಿದೆ. ಒಲಿಂಪಿಕ್ಸ್ನಲ್ಲಿ 10 ಮೀ. ಏರ್ ಪಿಸ್ತೂಲ್ನಲ್ಲಿಕಂಚಿನ ಪದಕ ಬಾಚಿಕೊಂಡ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಅವರಿಗೆ ಅಭಿನಂದನೆಗಳು. ಇಡೀ ಭಾರತ ಈ ಸ್ಫೂರ್ತಿದಾಯಕ ಪ್ರದರ್ಶನ ಮತ್ತು ಸಾಧನೆಯನ್ನು ಸಂಭ್ರಮಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಮಹಿಳೆಯರ 10 ಮೀಟರ್ ಏರ್ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದ ಪದಕಗಳ ಖಾತೆ ತೆರೆದ ಮನು ಭಾಕರ್, ಈಗ ಮಿಶ್ರ ವಿಭಾಗದಲ್ಲೂ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಪದಕ ಪಡೆದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.