ಮಂಡ್ಯ: ಅಣ್ಣ ಫೋಟೋಗೆ ಹೂವನ್ನು ಹಾಕ ಬೇಡಣ್ಣ ಎಂದು ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ಗೋಳಾಡುತ್ತಿದ್ದಾರೆ.
ತನ್ನ ಪತಿ ಇಹಲೋಕ ತ್ಯಜಿಸಿದ್ದಾರೆ ಎಂಬ ದೃಷ್ಟಿಯಿಂದ ನೋಡಲು ಕಲಾವತಿ ಅವರ ಮನಸ್ಸು ಒಪ್ಪುತ್ತಿಲ್ಲ. ಇಂದು ಗೆಳೆಯರು ಹಾಗೂ ಸಂಬಂಧಿಕರು ಮನೆ ಮುಂದೆ ಗುರು ಅವರ ಫೋಟೋ ಇಟ್ಟು, ಹೂವಿನ ಹಾರ ಹಾಕಲು ಮುಂದಾದರು. ಈ ವೇಳೆ ಕಲಾವತಿ ಅವರು ಅಣ್ಣ ಹೂವನ್ನು ಹಾಕಬೇಡಣ್ಣ ಎಂದು ಅಳುತ್ತಾ ಗೋಳಾಡಿದ್ದಾರೆ.
ಕಲಾವತಿ ಅವರ ಬೇಡಿಕೆಗೆ ಮಣಿದು ಗೆಳೆಯರು ಹಾಗೂ ಸಂಬಂಧಿಕರು ಮನೆ ಮುಂದೆ ಫೋಟೋ ಇಡದೇ, ಹೂವಿನ ಹಾರ ಹಾಕದೆ ಸುಮ್ಮನಾದರು. ಗುರು ಪತ್ನಿ ಕಣ್ಣೀರಿಟ್ಟ ಭಾವುಕ ಸನ್ನಿವೇಶ ನೋಡಿ ಬಂಧುಗಳು ಹಾಗೂ ಸ್ನೇಹಿತರು ತಾವು ಕಣ್ಣೀರಿಟ್ಟಿದ್ದಾರೆ.
ಪತಿ ನಾನು ಏಪ್ರಿಲ್ಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೂ ನಾವು ಅವರು ಡ್ಯೂಟಿಗೆ ಹೋದಾಗೆಲ್ಲಾ ಹುಷಾರು, ಹುಷಾರು ಎಂದು ಹೇಳುತ್ತಿದ್ದೆವು. ಇಂದು ಈ ಸುದ್ದಿ ತಂದುಕೊಡುವುದಕ್ಕೆ ಬಿಡಲಿಲ್ಲ ಅನ್ನಿಸುತ್ತದೆ ಎಂದು ಕಣ್ಣೀರು ಹಾಕಿಕೊಂಡು ಹೇಳಿದ್ದಾರೆ.
ನಾನು ಇನ್ನೂ ಹತ್ತು ವರ್ಷ ಸೇವೆ ಸಲ್ಲಿಸದೇ ಕೆಲಸ ಬಿಡುವುದಿಲ್ಲ ಎಂದಿದ್ದರು. ಮದುವೆಯಾಗಿ ವರ್ಷವಾಗಿಲ್ಲ, ಜೀವನದಲ್ಲಿ ಅವರಿಗೆ ನೆಮ್ಮದಿ ಅನ್ನುವುದು ಸಿಗಲಿಲ್ಲ. ದೇಶ ಕಾಯುವವರನ್ನೇ ಸಾಯಿಸಿದ್ದಾರೆ. ಅವರು ಏನು ಮಾಡಿದ್ದರು? ಇದರಿಂದ ಅವರಿಗೆ ಏನು ಸಿಕ್ಕಿತು? ಎಂದು ಆಕ್ರೋಶದಿಂದ ದುಷ್ಟರಿಗೆ ಕಲಾವತಿ ಅವರು ಪ್ರಶ್ನೆ ಮಾಡಿದ್ದಾರೆ.
ದೇಶದ ಜನರನ್ನು ರಕ್ಷಣೆ ಮಾಡಲು ಹೋಗುತ್ತಿದ್ದವರನ್ನೇ ಕೊಲೆ ಮಾಡಿದ್ದಾರೆ. ಅವರು ಹೇಗೆ ಸತ್ತರೋ, ಹಾಗೇ ದುಷ್ಟರು ಸಾಯಬೇಕು. ಈ ಬಗ್ಗೆ ಎಲ್ಲರಿಗೂ ಗೊತ್ತಾಗಲಿ, ಪ್ಲೀಸ್ ಎಲ್ಲರೂ ಸಹಾಯ ಮಾಡಿ ಪ್ಲೀಸ್, ಅವರ ರೀತಿಯಲ್ಲೇ ಬ್ಲಾಸ್ಟ್ ಮಾಡಿ ದುಷ್ಟರನ್ನು ಸಾಯಿಸಬೇಕು. ನನ್ನ ಗಂಡನನ್ನು ಕೊಂದವರನ್ನು ಸುಮ್ಮನೆ ಬಿಡಬಾರದು. ದಯವಿಟ್ಟು ಅವರನ್ನು ಬಿಡಬೇಡಿ ಎಂದು ಕಣ್ಣೀರು ಹಾಕುತ್ತಾ ಕಲಾವತಿ ಅವರು ಮನವಿ ಮಾಡಿಕೊಂಡಿದ್ದಾರೆ.
https://www.youtube.com/watch?v=YBY-Btof0_s&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv