ಮುಂಬೈ/ಚೆನ್ನೈ: ದಸರಾ(Dasara) ಸಮಯದಲ್ಲಿ ಆರ್ಎಸ್ಎಸ್(RSS) ಮತ್ತು ಬಿಜೆಪಿ(BJP) ನಾಯಕರ ಮೇಲೆ ದಾಳಿ ನಡೆಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಚು ರೂಪಿಸಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.
ನಾಗ್ಪುರದಲ್ಲಿರುವ(Nagpur) ಆರ್ಎಸ್ಎಸ್ನ ಕೇಂದ್ರ ಕಚೇರಿ, ಹಲವು ಹಿರಿಯ ಆರ್ಎಸ್ಎಸ್ ನಾಯಕರು ಹಾಗೂ ಬಿಜೆಪಿ ನಾಯಕರ ಮೇಲೆ ದಾಳಿಗೆ ಪಿಎಫ್ಐ ಯೋಜನೆ ರೂಪಿಸಿತ್ತು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ATS) ಮೂಲಗಳನ್ನು ಆಧಾರಿಸಿ ವರದಿಯಾಗಿದೆ.
ದಸರಾ ಸಮಯದಲ್ಲಿ ಆರ್ಎಸ್ಎಸ್ ಕಚೇರಿಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ಆರ್ಎಸ್ಎಸ್ ನಾಯಕರು ಭಾಗಿಯಾಗುತ್ತಾರೆ. ಈ ಸಮಯವನ್ನು ನೋಡಿಕೊಂಡು ಅವರ ಮೇಲೆ ದಾಳಿ ನಡೆಸಲು ಪಿಎಫ್ಐ ಪ್ಲ್ಯಾನ್ ಮಾಡಿತ್ತು ಎಂದು ಎಟಿಎಸ್ ಹೇಳಿದೆ.
ಕಳೆದ ವಾರ ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ(NIA) ದಾಳಿಯ ಜೊತೆ ಮಹಾರಾಷ್ಟ್ರದಲ್ಲಿ ಎಟಿಎಸ್ ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿತ್ತು.
14 ಮಂದಿ ಅರೆಸ್ಟ್:
ಪಿಎಫ್ಐ ಮೇಲೆ ಎನ್ಐಎ ದಾಳಿ ಬಳಿಕ ತಮಿಳುನಾಡಿನಲ್ಲಿ(Tamilnadu) ಆರ್ಎಸ್ಎಸ್ ಕಚೇರಿ, ಹಿಂದೂ ಸಂಘಟನೆಗಳ ನಾಯಕರ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿ ಸಂಬಂಧ ಪಿಎಫ್ಐ ಮತ್ತು ಎಸ್ ಡಿಪಿಐನ 14 ಕಾರ್ಯಕರ್ತರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಸೇಲಂ, ಈರೋಡ್, ಕೊಯಮತ್ತೂರು, ದಿಂಡಿಗಲ್, ತೂತ್ತುಕುಡಿ, ಕನ್ಯಾಕುಮಾರಿ, ಮದುರೈ ಸೇರಿ ಹಲವು ಕಡೆ ದಾಳಿ ನಡೆಸಿದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.