ಮಂಡ್ಯ: ಕೌಟುಂಬಿಕ ಕಲಹದಿಂದ ಮನನೊಂದು ರಸ್ತೆಯ ಮೇಲೆ ಡೆತ್ ನೋಟ್ ಬರೆದು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರಗಸೂರು ಗ್ರಾಮದ ಬಳಿ ನಡೆದಿದೆ.
ಮರಿಸ್ವಾಮಿ(60) ಎಂಬವರೇ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮರಿಸ್ವಾಮಿ ತಮ್ಮ ಮಗ ಶಿವರಾಜುಗೆ ಬೆಂಗಳೂರು ಮೂಲದ ಹೇಮಾಳ ಜತೆ ಮದುವೆ ಮಾಡಿದ್ದರು. ಆದರೆ ಸೊಸೆ ಮತ್ತು ಮಗನ ಸಂಸಾರದಲ್ಲಿ ಬಿರುಕು ಮೂಡಿದ್ದು, ಅದನ್ನು ಸರಿಪಡಿಸಲು ನ್ಯಾಯ ಪಂಚಾಯ್ತಿ ಮಾಡಿದರು ಸಾಧ್ಯವಾಗಿರಲಿಲ್ಲ.
ಸೊಸೆಯ ನಡವಳಿಕೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ಸಾಯುವ ಮುನ್ನ ಪೊಲೀಸರಿಗೆ ಬರೆದಿರುವ ದೂರಿನ ಪ್ರತಿಯಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ನಾನು ಸತ್ತ ನಂತರ ಮಳವಳ್ಳಿ ಶಾಸಕ ಅನ್ನದಾನಿಯನ್ನು ಕರೆಸಿ ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ರಸ್ತೆಯ ಮೇಲೆ ಬರೆದಿದ್ದಾರೆ.
ಜೊತೆಗೆ ರಸ್ತೆ ಬದಿಯಲ್ಲಿ ಟವೆಲ್ ಹಾಸಿ ಅದರ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಲು ಬರೆದಿದ್ದ ಪತ್ರ ಹಾಗೂ ಸ್ವಲ್ಪ ಹಣವನ್ನಿಟ್ಟು ಕುಂಕುಮ ಅರಿಶಿಣದಿಂದ ಪೂಜೆ ಮಾಡಿದ್ದಾರೆ. ನಂತರ ರಸ್ತೆ ಪಕ್ಕದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಸಂಬಂಧ ಬೆಳಕವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.