ಬೆಂಗಳೂರು: ಪ್ರತಿಷ್ಠಿತ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಜಾಹೀರಾತನ್ನು ನೋಡಿ ಕಡಿಮೆ ದರದಲ್ಲಿ ಆನ್ ಲೈನ್ ಮೂಲಕ, ಮೊಬೈಲ್ ಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಮೋಸಹೋದ ಘಟನೆ ನಗರದ ನೆಲಮಂಗಲದಲ್ಲಿ ವರದಿಯಾಗಿದೆ.
ನೆಲಮಂಗಲ ಪಟ್ಟಣದ ಸಮೀಪದ ರಾಯನ್ನಗರ ನಿವಾಸಿ, ಶಿವಕುಮಾರ್ ಆನ್ ಲೈನ್ ಮೂಲಕ ಮೋಸ ಹೋದ ವ್ಯಕ್ತಿ. ಕೇವಲ 2,800 ರೂ. ಗೆ ಒಂದು ಸ್ಯಾಮ್ ಸಂಗ್ ಮೊಬೈಲ್ ಕೊಂಡರೆ ಮತ್ತೊಂದು ಮೊಬೈಲ್ ಉಚಿತ. ಜೊತೆಗೆ ಚಾರ್ಜರ್, ಹೆಡ್ ಸೆಟ್ ನೀಡುವುದಾಗಿ ಜಾಹೀರಾತು ಪ್ರಕಟವಾಗಿತ್ತು. ಹೀಗೆ ಕಡಿಮೆ ದರದಲ್ಲಿ ಫೋನ್ ಸಿಗುತ್ತದೆ ಎಂದು ಜಾಹೀರಾತು ನೋಡಿ ಬೆರಗಾದ ಶಿವಕುಮಾರ್, ಆನ್ ಲೈನ್ ಮೂಲಕ ಮೊಬೈಲ್ ಬುಕ್ ಮಾಡಿದ್ದಾರೆ. ಆದ್ರೆ ಅಂಚೆ ಮೂಲಕ ಬಂದತಂಹ ಕವರ್ ಓಪನ್ ಮಾಡಿದಾಗ ಅದರೊಳಗೆ ಕಳಪೆ ಗುಣಮಟ್ಟದ ಬೇರೆ ಕಂಪೆನಿಯ ಮೊಬೈಲ್ ನೀಡಿದ್ದಾರೆ ಎಂದು ಶಿವಕುಮಾರ್ ಆರೋಪ ಮಾಡಿದ್ದಾರೆ.
ನನಗೆ ಆದ ಮೋಸ ಬೇರೆ ಯಾರಿಗೂ ಆಗಬಾರದು ಎನ್ನುವ ಉದ್ದೇಶದಿಂದ ಶಿವಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಆನ್ ಲೈನ್ ಮುಖಾಂತರ ವ್ಯವಹರಿಸುವಾಗ ಎಚ್ಚರವಿದ್ದರೆ ಮಾತ್ರ, ಇಂತಹ ವಂಚನೆಗಳನ್ನು ತಡೆಯಬಹುದು ಎಂದು ಶಿವಕುಮಾರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.