ಮೈಸೂರು: ಕಡಿಮೆ ಬೆಲೆಗೆ ಮೊಬೈಲ್ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ವಂಚಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮೈಸೂರಿನ ಸರಸ್ವತಿಪುರಂನ ಮಂಗಲರಾಂ ವಂಚನೆಗೊಳಗಾದ ವ್ಯಕ್ತಿ. ಅಗ್ಗದ ದರದಲ್ಲಿ ಮೊಬೈಲ್ ಸಿಗಲಿದೆ ಎಂಬ ಆಸೆಯಿಂದ ಆನ್ ಲೈನ್ ಮೂಲಕ ಬುಕ್ ಮಾಡಿದ್ದ ವ್ಯಕ್ತಿ ಪಾರ್ಸಲ್ನಲ್ಲಿ ಬಂದ ವಸ್ತುಗಳನ್ನ ನೋಡಿ ದಂಗಾಗಿದ್ದಾರೆ.
ಇತ್ತೀಚೆಗೆ ಇವರಿಗೆ ಕರೆ ಮಾಡಿದ್ದ ವ್ಯಕ್ತಿ 3,500 ರೂಪಾಯಿಗೆ ಮೊಬೈಲ್ ನೀಡುವುದಾಗಿ ಹೇಳಿ, ಆನ್ಲೈನ್ ನಲ್ಲಿ ಬುಕ್ ಮಾಡುವಂತೆ ಹೇಳಿದ್ದ. ಇದನ್ನ ನಂಬಿ ಮಂಗಲರಾಂ ಹಣ ಕೊಟ್ಟು ಬುಕ್ ಮಾಡಿದ್ದರು. ಆದರೆ ಶನಿವಾರ ಬಂದ ಪಾರ್ಸಲ್ ತೆಗೆದು ನೋಡಿದಾಗ ಅದರಲ್ಲಿ ಒಂದು ಸೀರೆ, ಲಕ್ಷ್ಮಿ ಹಾಗೂ ಆಮೆಯ ಪುಟ್ಟ ಮೂರ್ತಿ ಇರುವುದನ್ನು ಕಂಡು ಹೌಹಾರಿದ್ರು.
ಬಳಿಕ ತಮಗೆ ಕರೆ ಮಾಡಿದ್ದ ವ್ಯಕ್ತಿಗೆ ಮಂಗಲರಾಂ ಮತ್ತೆ ಸಂಪರ್ಕಿಸಲು ಪ್ರಯತ್ನಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿಯಿಂದ ಅಸಮರ್ಪಕ ಉತ್ತರ ಬಂದಿದೆ. ಆ ಬಳಿಕ ಕರೆ ಮಾಡಿದರೆ ನಾಟ್ ರೀಚಬಲ್ ಬರ್ತಾ ಇತ್ತು. ಇದರಿಂದ ತಾವು ಮೋಸ ಹೋಗಿರುವುದನ್ನು ತಿಳಿದ ಮಂಗಲರಾಂ ಕಂಗಾಲಾಗಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಮಂಗಲರಾಂ ಚಿಂತಿಸಿದ್ದಾರೆ.