ಹುಬ್ಬಳ್ಳಿ: ರಾಜ್ಯಾದ್ಯಂತ ಮಕ್ಕಳ ಕಳ್ಳರ ವದಂತಿಯೊಂದು ಹರಡಿತ್ತು. ಪೊಲೀಸ್ ಇಲಾಖೆ ಇದು ಕೇವಲ ವದಂತಿ ಅಂತಾ ಸ್ಪಷ್ಟಪಡಿಸಿದ ನಂತರವೂ ನಗರದ ಜನರು ಮಕ್ಕಳ ಕಳ್ಳರೆಂದು ಭಾವಿಸಿ ಐವರು ಭಿಕ್ಷುಕಿಯರಿಗೆ ದಿಗ್ಬಂಧನ ಹಾಕಿದ್ದಾರೆ.
ಹುಬ್ಬಳ್ಳಿಯ ಹೆಗ್ಗೇರಿ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಂಜಾನ್ ಹಬ್ಬದ ನಿಮಿತ್ತ ಭಿಕ್ಷಾಟನೆಗೆ ಆಗಮಿಸಿದ್ದ ಐವರು ಮಹಿಳೆಯರನ್ನು ಸ್ಥಳೀಯರು ಕೂಡಿ ಹಾಕಿದ್ದರು. ರಾಜಸ್ಥಾನ ಮೂಲದವರಾಗಿದ್ದರಿಂದ ಮಹಿಳೆಯರಿಗೆ ಕನ್ನಡ ಮಾತನಾಡಲು ಬರುತಿರಲಿಲ್ಲ. ಇದರಿಂದ ಅನುಮಾನಗೊಂಡ ಸ್ಥಳೀಯರು ರೈಲ್ವೇ ನಿಲ್ದಾಣದ ಬಳಿ ತಾತ್ಕಾಲಿಕ ಶೆಡ್ನಲ್ಲಿ ಕೂಡಿ ಹಾಕಿದ್ದಾರೆ.
ಶೇಲಾ, ಸಂಗೀತಾ, ಕೋಮುಲ, ಧನ್ಯಾರಾವ್, ಕಿರಣ್ ಎಂಬವರನ್ನು ತಾತ್ಕಾಲಿಕ ಶೆಡ್ನಲ್ಲಿ ಕೂಡಿ ಹಾಕಲಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯರನ್ನು ರಕ್ಷಣೆ ಮಾಡಿ, ಮಕ್ಕಳ ಕಳ್ಳರಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಭಿಕ್ಷುಕರು ನಾವು ರಾಜಸ್ಥಾನದ ಮೂಲದವರು, ರಂಜಾನ್ ನಿಮಿತ್ತ ಭಿಕ್ಷಾಟನೆಗಾಗಿ ಹುಬ್ಬಳ್ಳಿಗೆ ಬಂದಿರುವುದಾಗಿ ಹೇಳಿದ್ದಾರೆ.