ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಗ್ರಾಮಸ್ಥರು ವಾಮಾಚಾರಕ್ಕೆ ಹೆದರಿ ಇದೀಗ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.
ಆಂದೋಲ ಗ್ರಾಮ ಪಂಚಾಯತಿಯಲ್ಲಿ 80 ಲಕ್ಷಕ್ಕೂ ಅಧಿಕ ಅವ್ಯವಹಾರವಾಗಿತ್ತು. ಅವ್ಯವಹಾರದ ತನಿಖೆಗೆ ಆಗ್ರಹಿಸಿ ಇಂದು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದರು. ಆದ್ರೆ ಗ್ರಾಮಸ್ಥರ ಪ್ರತಿಭಟನೆ ಹತ್ತಿಕ್ಕಲು ಭಾನುವಾರ ರಾತ್ರಿ ಪಂಚಾಯತ್ ಮುಂಭಾಗದಲ್ಲಿ ನಿಂಬೆಹಣ್ಣು, ಅರಶಿನ, ಕುಂಕಮ, ತೆಂಗಿನಕಾಯಿ ಬಳಸಿ ವಾಮಾಚಾರ ಮಾಡಿದ್ದಾರೆ. ಈ ಮೂಲಕ ಧರಣಿ ನಡೆಸುವವರಿಗೆ ಭಯ ಹುಟ್ಟಿಸಲು ಗ್ರಾಮ ಪಂಚಾಯ್ತಿಗೆ ಭಾನಾಮತಿ ಮಾಡಿಸಿರುವ ಶಂಕೆಯಿದೆ.
ಇದರಿಂದ ಹೆದರಿದ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ದುಷ್ಕರ್ಮಿಗಳ ಈ ಕೃತ್ಯದಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಹೊರಗೆ ಬರಲು ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ.