ಕಾರವಾರ: ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ನಾಲ್ಕು ಜನ ಮೀನುಗಾರರು ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದರು. ಈ ವೇಳೆ ಸ್ಥಳೀಯ ಮೀನುಗಾರರು ಮುಳುಗುತ್ತಿದ್ದವರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಭಟ್ಕಳದ ಬೆಳ್ನಿ ಗ್ರಾಮದ ತಿಮ್ಮಪ್ಪ ಮೊಗೇರ್, ರಾಮಚಂದ್ರ ಖಾರ್ವಿ, ಗಣಪತಿ ಖಾರ್ವಿ ಮತ್ತು ಶ್ರೀನಿವಾಸ್ ಖಾರ್ವಿ ಅವರನ್ನು ರಕ್ಷಣೆ ಮಾಡಲಾಗಿದೆ. ನಾಲ್ವರನ್ನು ಭಟ್ಕಳದ ಮುಂಡಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಈ ನಾಲ್ವರು ಅರಬ್ಬಿ ಸಮುದ್ರದಲ್ಲಿ ಪಾತಿ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ಮರಳಿ ವಾಪಸ್ಸಾಗುತ್ತಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ದೋಣಿ ಮಗಚಿ ನಾಲ್ವರು ಮೀನುಗಾರರು ಸಮುದ್ರಪಾಲಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಪ್ರಾಣಾಪಾಯದಲ್ಲಿದ್ದ ನಾಲ್ವರನ್ನು ರಕ್ಷಿಸಿದ್ದಾರೆ.
ಈ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.