– ಕಾರ್ಪೋರೇಟರ್ ಗಂಭೀರ ಆರೋಪ
ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಮಾಡಲಾಗಿದ್ದ ಲಾಕ್ ಡೌನ್ ಅನ್ನು ಮೇ.3ರವರೆಗೆ ವಿಸ್ತರಿಸಿದ್ದು, ಬೆಂಗಳೂರಿನ ಎರಡು ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ. ಆದರೂ ಜನ ನಿರ್ಲಕ್ಷ್ಯಿಸುತ್ತಿರುವುದು ಬೆಳಕಿಗೆ ಬಂದಿದೆ.
ಹೌದು. ಬೆಂಗಳೂರಿನ ಬಾಪೂಜಿನಗರ ಹಾಗೂ ಪಾದರಾಯನಪುರ ಈ ಎರಡು ಏರಿಯಾಗಳನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ. ಆದರೆ ಬಾಪೂಜಿನಗರದಲ್ಲಿ ಮಾತ್ರ ಹೊರಗೆ ಬಿಗಿ ಪೊಲೀಸ್ ಬಂದೊಬಸ್ತ್ ಆಗಿದ್ದು, ಒಳಗಡೆ ಜನ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.
ಬಾಪೂಜಿನಗರಕ್ಕೆ ಸಂಪರ್ಕ ಮಾಡೋ ಮೂರು ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನಗಳಿಗೆ ನಿರ್ಬಂಧ ಹೇರಿದ್ದಾರೆ. ಪಾಸ್ ಇದ್ದವರಿಗಷ್ಟೇ ಒಳಗೆ-ಹೊರಗೆ ಹೋಗಲು ಬಿಡುತ್ತಿದ್ದಾರೆ. ಆದರೆ ಏರಿಯಾ ಒಳಗೆ ಜನ ಎಂದಿನಂತೆ ಆರಾಮಾಗಿ ಓಡಾಡುತ್ತಿದ್ದಾರೆ. ಪೊಲೀಸರು ಕೂಡ ಸ್ಥಳೀಯರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೇ ಬೇಸತ್ತಿದ್ದಾರೆ. ನಮ್ ಏರಿಯಾಗೆ ಹಾಲು ಬಂದಿಲ್ಲ, ನಮ್ ಏರಿಯಾ ದಿನಸಿ ಬಂದಿಲ್ಲ ಎಂದು ನೆಪ ಹೇಳಿಕೊಂಡು ಹೊರಗೆ ಓಡಾಡುತ್ತಿದ್ದಾರೆ.
ಇತ್ತ ಬಾಪೂಜಿ ನಗರ ಕಾರ್ಪೋರೇಟರ್ ಅಜ್ಮಲ್ ಬೇಗ್ ಮಾಧ್ಯಮದೊಂದಿಗೆ ಮಾತನಾಡಿ ಗಂಭೀರ ಆರೋಪ ಮಾಡಿದ್ದಾರೆ. ಬಾಪೂಜಿ ನಗರ ವಾರ್ಡ್ ನಲ್ಲಿ ಸುಮಾರು 80 ಸಾವಿರ ನಿವಾಸಿಗಳಿದ್ದಾರೆ. ಆದರೆ ಕೇವಲ ಎರಡು ಸಾವಿರ ಕಿಟ್ ಗಳನ್ನು ಮಾತ್ರ ಬಿಬಿಎಂಪಿಯಿಂದ ನೀಡಲಾಗಿದೆ. 8 ಸಾವಿರ ಲೀಟರ್ ಹಾಲು ಅವಶ್ಯಕತೆ ಇದೆ. ಆದರೆ ನಮ್ಮ ವಾರ್ಡಿಗೆ ಬಿಬಿಎಂಪಿ ನೀಡ್ತಿರೋದು ಕೇವಲ 900 ಲೀಟರ್ ಹಾಲು ಮಾತ್ರ. ಈ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಹಾಗೂ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ನಾನು ಕಾಂಗ್ರೆಸ್ ಕಾರ್ಪೊರೇಟರ್ ಅಂತ ನಮ್ಮ ವಾರ್ಡಿಗೆ ತಾರತಮ್ಯ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.