ಹಾಸನ: ಮದಗಜ ಚಿತ್ರವನ್ನು ಅಭಿಮಾನಿಗಳು ಸ್ವೀಕರಿಸಿರುವುದು ಸಂತೋಷ ತಂದಿದೆ. ಜನ ಥಿಯೇಟರ್ಗೆ ಬಂದು ಸಿನಿಮಾ ನೋಡಿದ್ರೆ ನಮಗೆ ಖುಷಿ ಎಂದು ಸ್ಯಾಂಡಲ್ವುಡ್ ನಟ ಶ್ರೀಮುರಳಿ ಅಭಿಪ್ರಾಯಪಟ್ಟಿದ್ದಾರೆ.
ಹಾಸನದಲ್ಲಿ ಮದಗಜ ಚಿತ್ರ ರಿಲೀಸ್ ಆಗಿರುವ ಚಿತ್ರಮಂದಿರಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿತ್ರಕ್ಕೆ ರಾಜ್ಯಾದ್ಯಂತ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ಇಂದು ಅಭಿಮಾನಿಗಳ ದರ್ಶನಕ್ಕೆ ಹಾಸನಕ್ಕೆ ಬಂದಿದ್ದೇನೆ. ಜನರ ಪ್ರತಿಕ್ರಿಯೆ ಕಂಡು ತುಂಬಾ ಖುಷಿ ಆಗಿದೆ ಎಂದರು.
OTTಯಲ್ಲಿ ಸಿನೆಮಾ ರಿಲೀಸ್ ವಿಚಾರವಾಗಿ ಪ್ರತಿಕ್ರಿಯಿಸಿ, OTT ಒಂದು ಡಿಜಿಟಲ್ ಫ್ಲಾಟ್ಫಾರ್ಮ್, OTTಯಲ್ಲಿ ಸಿನೆಮಾಗಳು ತಡವಾಗಿ ಬರಲು ತಯಾರಿ ಮಾಡ್ಕೋಬೇಕು. ಜನ ಥಿಯೇಟರ್ಗೆ ಬಂದು ಸಿನೆಮಾ ನೋಡಿದ್ರೆ ನಮಗೆ ಖುಷಿ. OTTಯಲ್ಲಿ ನಾವ್ಯಾರು ಸಿನೆಮಾವನ್ನು ಬೇಗ ರಿಲೀಸ್ ಮಾಡುತ್ತಿಲ್ಲ. ಹಿರಿಯರು, ತಿಳಿದವರು ಬುದ್ಧಿವಂತರು ಈ ಬಗ್ಗೆ ಏನಾದರೂ ಒಂದು ಮಾಡಬೇಕು. ಅವರು ಏನೇ ಹೇಳಿದ್ರು ನಾವು ಅವರ ಜೊತೆ ನಿಲ್ಲುತ್ತೇವೆ. ರಿಲೀಸ್ ಮಾಡಬೇಡಿ, ಚೇಂಜ್ ಮಾಡಿ ಎಂದು ಹೇಳುವಷ್ಟು ದೊಡ್ಡವರಲ್ಲ ನಾವು. ಅಭಿಮಾನಿಗಳು ಥಿಯೇಟರ್ಗೆ ಬಂದು ಸಿನೆಮಾ ನೋಡುವ ವಿಚಾರವಾಗಿ ನಾವೆಲ್ಲ ಒಟ್ಟಿಗೆ ಇರುತ್ತೇವೆ ಎಂದರು.
ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿ ರಿಲೀಸ್ ಆಗುವ ವಿಚಾರದ ಬಗ್ಗೆ ಮಾತನಾಡಿ, ಅದರ ಬಗ್ಗೆ ಏನು ಹೇಳಬೇಕು ತಿಳಿಯುತ್ತಿಲ್ಲ. ತುಂಬ ವರ್ಷದಿಂದ ಡಬ್ಬಿಂಗ್ ನಮ್ಮ ರಾಜ್ಯದಲ್ಲಿ ಇರಲಿಲ್ಲ. ಇತ್ತೀಚೆಗೆ ಡಬ್ಬಿಂಗ್ ಚಿತ್ರ ರಿಲೀಸ್ ಆಗುತ್ತಿದೆ. ಏನಾದರೂ ಅಭಿಮಾಮಾನಿಗಳು ಒಪ್ಪಬೇಕಲ್ವಾ, ಕರ್ನಾಟಕದಲ್ಲಿ ಅದು ಎಷ್ಟರ ಮಟ್ಟಿಗೆ ವರ್ಕ್ ಆಗುತ್ತಿದೆ ಗೊತ್ತಿಲ್ಲ. ಆದರೆ ಅದು ಡೇಂಜರ್. ನಾವು ಒಳ್ಳೊಳ್ಳೆ ಸಿನೆಮಾ ಮಾಡ್ಬೇಕು. ನಮ್ಮ ಅಡುಗೆ ಸರಿಯಾಗಿ ಇರಬೇಕು ಎಂದು ವ್ಯಂಗ್ಯವಾಡಿದರು.