ಚಿತ್ರದುರ್ಗ: ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಸಿಎಂ ಯಡಿಯೂರಪ್ಪನವರಿಗೆ ದುಂಬಾಲು ಬಿದ್ದಿದ್ದ ಆರೋಗ್ಯ ಸಚಿವ ಶ್ರೀರಾಮುಲು, ಇದೀಗ ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಿಕ್ಕಿರೋದಕ್ಕೆ ಮಲತಾಯಿ ಧೋರಣೆ ತೋರುತಿದ್ದಾರಾ ಎಂಬ ಅನುಮಾನ ಚಿತ್ರದುರ್ಗದ ಜನರಲ್ಲಿ ಕಾಡುತ್ತಿದೆ.
ಯಾಕೆಂದರೆ ಗುರುವಾರ ರಾತ್ರಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಚಿವ ಶ್ರೀರಾಮುಲು ಅವರ ವಾಸ್ತವ್ಯಕ್ಕಾಗಿ ಭರ್ಜರಿ ಸಿದ್ಧತೆ ಮಾಡಲಾಗಿತ್ತು. ವಿಐಪಿ ವಾರ್ಡಿನಲ್ಲಿ ಫೈವ್ ಸ್ಟಾರ್ ಹೋಟೆಲ್ ಮಾದರಿಯಲ್ಲಿ ಎಸಿ, ಟಿವಿ ಹಾಗೂ ಇತರೆ ಐಶಾರಾಮಿ ಪೀಠೋಪಕರಣಗಳಿಂದ ಮದುವಣಗಿತ್ತಿಯಂತೆ ಅಲಂಕರಿಸಿ ಸಿದ್ಧಪಡಿಸಲಾಗಿತ್ತು. ಆದರೆ ಅಚ್ಚರಿಯ ವಿಸಿಟ್ ಕೊಡ್ತಿನಿ ಎಂದು ನೆಪ ಹೇಳಿರುವ ಸಚಿವವರು ಗುರುವಾರ ರಾತ್ರಿ ಚಿತ್ರದುರ್ಗದ ಜಿಲ್ಲಾಸ್ಪತ್ರೆ ವಾಸ್ತವ್ಯವನ್ನು ರದ್ದುಗೊಳಿಸಿ ಮಲತಾಯಿ ಧೋರಣೆ ತೋರುತ್ತಿದ್ದಾರೆಂಬ ಮಾತಿಗೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ. ಇದನ್ನೂ ಓದಿ:ಆರೋಗ್ಯ ಸಚಿವರ ವಾಸ್ತವ್ಯಕ್ಕೆ ಹೈಟೆಕ್ ಟಚ್ – ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಮಿಂಚಿಂಗ್
ಅಲ್ಲಿನ ನೀರಿನ ಸಮಸ್ಯೆ, ವೈದ್ಯರ ಕೊರತೆ ಮತ್ತು ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಅಹವಾಲು ಸಲ್ಲಿಸಬೇಕೆಂದು ಕಾತರದಿಂದ ಕಾಯ್ದಿದ್ದ ದುರ್ಗದ ಜನರಿಗೆ ಇದರಿಂದಾಗಿ ಬಾರಿ ನಿರಾಸೆಯಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ವಿಸ್ತ್ರತ ವರದಿ ಬಿತ್ತರಿಸಿ ಸಚಿವರ ಗಮನ ಸೆಳೆದಿತ್ತು. ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದ ಜನರಿಗೆ ಸಚಿವರ ವಾಸ್ತವ್ಯ ರದ್ದಾಗಿರುವುದು ಭಾರೀ ಬೇಸರ ಮೂಡಿಸಿದೆ.
ಹೀಗಾಗಿ ಶೀಘ್ರದಲ್ಲೇ ಈ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ರಾಮುಲು ವಾಸ್ತವ್ಯ ಹೂಡುವ ಮೂಲಕ ಇಲ್ಲಿನ ಸಮಸ್ಯೆಗಳಿಗೆ ಬ್ರೇಕ್ ಹಾಕುತ್ತಾರಾ ಅಥವಾ ಮಲತಾಯಿ ಧೋರಣೆ ಮುಂದುವರಿಸುತ್ತಾರಾ ಎಂದು ಕಾದು ನೋಡಬೇಕಿದೆ.