ಕಾರವಾರ: ಶಿರೂರು ಶ್ರೀಗಳು ನನಗೆ ಮಕ್ಕಳಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದರಿಂದ ಅವರಿಗೆ ಪಟ್ಟದ ದೇವರನ್ನು ಕೊಡಲಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಶಿರೂರು ಶ್ರೀ ಗಳ ಅಂತಿಮ ದರ್ಶನಕ್ಕೆ ಹೋಗದ ಕುರಿತು ಸ್ವಷ್ಟನೆ ನೀಡಿ ಶಿರಸಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಶಿರೂರು ಶ್ರೀಗಳು ಸನ್ಯಾಸತ್ವಕ್ಕೆ ಭ್ರಷ್ಟರಾಗಿದ್ದರು ಎಂಬುದರ ಬಗ್ಗೆ ನಮ್ಮ ಬಳಿ ಮಾಹಿತಿಗಳಿವೆ. ಅದ್ದರಿಂದ ಅವರನ್ನು ಪೀಠಾಧಿಪತಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸ್ವಾಮಿಗಳಾದ ಮೇಲೆ ಧರ್ಮ ಬೇಕು. ಅದ್ದರಿಂದ ಅವರು ಮಠಾಧೀಶರಲ್ಲ, ಅವರು ಸನ್ಯಾಸವನ್ನು ಬಿಟ್ಟಿದ್ದಾರೆ, ಅವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ ಎಂದರು.
ಶಿರೂರು ಶ್ರೀಗಳ ಮೇಲೆ ಮಠಾಧೀಶರಿಗೆ ದ್ವೇಷವಿಲ್ಲ. ನನ್ನ ಅವರ ಮಧ್ಯೆ ಉತ್ತಮ ವಿಶ್ವಾಸವಿತ್ತು. ಆದರೆ ಕೆಲವು ನೈತಿಕ, ತಾತ್ವಿಕ ಕಾರಣಗಳಿಂದ ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ. ಅವರ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಶಿರೂರು ಶ್ರೀಗಳನ್ನು ಪೀಠಾಧಿಪತಿ ಅಲ್ಲ ಎಂದು ಎಲ್ಲರೂ ತೀರ್ಮಾನ ಮಾಡಿ ಒಪ್ಪಿಕೊಂಡಿದ್ದೇವೆ. ಅವರು ಸನ್ಯಾಸ ಜೀವನದಿಂದ ಭ್ರಷ್ಟರಾಗಿದ್ದಾರೆ ಅವರಿಗೆ ಮಗನಿದ್ದಾನೆ. ತನ್ನ ಮಗನೆಂದು ಎಲ್ಲರಿಗೂ ತೋರಿಸಿದ್ದಾರೆ. ಅಂತವರು ಸ್ವಾಮಿಗಳಾಗಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಶಿರೂರು ಶ್ರೀಗಳ ಸಂಶಯಾಸ್ಪದ ಸಾವು ಕುರಿತು ಪೂರ್ವಾಶ್ರಮದ ಸಹೋದರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿ, ಅವರು ನಿನ್ನೆ ನನ್ನೊಂದಿಗೆ ಲಾತವ್ಯ ಆಚಾರ್ಯ ಮಾತನಾಡುವಾಗ ಶಿರೂರು ಶ್ರೀಗಳು ಫಲಾಹಾರವನ್ನು ತೆಗೆದುಕೊಂಡಿದ್ದರು. ಆಹಾರವನ್ನು ಒಂದು ಕೆಟ್ಟ ಕಿಲುಬು ಪಾತ್ರೆಯನ್ನು ನೀಡಲಾಗಿದೆ ಅಂದಿದ್ದರು. ಅವರ ಸಾವಿಗೆ ಪಾತ್ರೆ ದೋಷ ಕಾರಣವಾಗಿರುವ ಸಾಧ್ಯತೆಗಳಿವೆ. ನಿನ್ನೆ ಅನುಮಾನ ಬಾರದ್ದು ಇಂದು ಹೇಗೆ ಅನುಮಾನ ಬಂತು. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ಬಳಿಕ ಈ ಕುರಿತು ಎಲ್ಲಾ ವಿಷಯ ತಿಳಿಯುತ್ತದೆ ಎಂದರು.