ಬೆಂಗಳೂರು: ಹಿರಿಯ ನಿರ್ಮಾಪಕಿ ಪಾವರ್ತಮ್ಮ ರಾಜ್ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಸದಾಶಿವನಗರದ ಪೂರ್ಣಪ್ರಜ್ಞ ಆಟದ ಮೈದಾನದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 4:30 ಕ್ಕೆ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಲಾಗುತ್ತದೆ. ಸರ್ಕಾರದಿಂದ ರಾಜ್ಕುಮಾರ್ ಸಮಾಧಿ ಬಳಿ ಪಾರ್ವತಮ್ಮ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಕುಮಾರ್ ಸಮಾಧಿ ಸ್ಥಳಕ್ಕೆ ಗೃಹ ಸಚಿವರಾದ ಜಿ. ಪರಮೇಶ್ವರ್ ಭೇಟಿ ನೀಡಿ ಅಂತ್ಯಸಂಸ್ಕಾರಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಸಿನಿಮಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದಂತಹ, ಅಭಿಮಾನಿಗಳ ಗೌರವ ಪ್ರೀತಿ ಸಂಪಾದನೆ ಮಾಡಿದ ಡಾ ರಾಜ್ ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್ಕುಮಾರ್ ಆನೇಕ ನಟ ನಟಿಯರಿಗೆ ಮಾರ್ಗದರ್ಶಕರಾದವರು. ಅವರ ನಿಧನದಿಂದ ಸಿನಿಮಾರಂಗ, ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ದುಃಖವಾಗಿದೆ. ದುಃಖ ಸಹಿಸೋ ಶಕ್ತಿ ದೇವರು ದಯಪಾಲಿಸಲಿ ಅಂದ್ರು.
ಸರ್ಕಾರದಿಂದ ರಾಜಕುಮಾರ್ ಸಮಾಧಿ ಬಳಿ ಪಾರ್ವತಮ್ಮ ರಾಜ್ ಕುಮಾರ ಅಂತ್ಯಸಂಸ್ಕಾಕ್ಕೆ ಜಾಗ ನೀಡಲಾಗಿದೆ. ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ ರಾಜ್ಕುಮಾರ್ ಅವರ ಅಂತ್ಯಸಂಸ್ಕಾರದಲ್ಲಿ ನಡೆದ ಘಟನೆ ಮರುಕಳಿಸದಿರಲಿ ಅಂತ ಪರಮೇಶ್ವರ್ ಹೇಳಿದ್ರು.
ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಸಾ.ರಾ ಗೋವಿಂದ್ ಮಾತನಾಡಿ, ರಾಜ್ ಕುಮಾರ್ ಸಮಾಧಿ ಪಕ್ಕದಲ್ಲಿ ಆಂತ್ಯಕ್ರಿಯೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಗೆ ಅಭಿನಂದನೆ. ಸದ್ಯ ಸ್ಥಳದಲ್ಲಿ ಪರಿಶೀಲನೆ ಮಾಡಿದ್ದೇವೆ. 3:30 ಕ್ಕೆ ಸದಾಶಿವನಗರದಿಂದ, ಸ್ಯಾಂಕಿ ಟ್ಯಾಂಕ್, ಸರ್ಕಲ್ ಮಾರಮ್ಮ ದೇವಾಲಯ, ಯಶವಂತಪುರ, ಗೋವರ್ಧನ ಥಿಯೇಟರ್ ಮಾರ್ಗವಾಗಿ ಕಂಠೀರವ ಸ್ಟುಡಿಯೋಗೆ ಪಾರ್ಥಿವ ಶರೀರ ಬರುತ್ತೆ ಅಂತ ತಿಳಿಸಿದ್ರು.
ದಾಸಯ್ಯನ ಪದ್ದತಿಯಲ್ಲಿ ವಿಧಿವಿಧಾನದಲ್ಲಿ ನಡೆಯುತ್ತದೆ. ರಾಜ್ ಕುಮಾರ್ ಅವರಿಗೆ ಅವರ ಕುಟುಂಬ ಯಾವುದೇ ವಿದಿ ವಿಧಾನ ಮಾಡಿರಲಿಲ್ಲ. ಈ ಬಾರಿ ಸರಿಯಾದ ರೀತಿಯಲ್ಲಿ ವಿಧಿವಿಧಾನ ನಡೆಸಲಾಗುತ್ತೆ. ಡಾ. ರಾಜ್ ಕುಮಾರ್ ಪ್ರತಿಷ್ಠಾನದಿಂದ ಸಕಲ ರೀತಿ ಸಿದ್ಧತೆ ಮಾಡಲಾಗಿದೆ. ಸಾರ್ವಜನಿಕರು ಶಾಂತಿಯಿಂದ ವರ್ತಿಸಬೇಕಾಗಿ ಮನವಿ ಮಾಡುತ್ತೇವೆ ಅಂದ್ರು.
ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳುತ್ತಿದ್ದ ಪಾರ್ವತಮ್ಮ ಅವರು ನಗರದ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.