ವಿಜಯಪುರ: ಬೇಕರಿಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿ ಉರಿದ ಪರಿಣಾಮ ಬೇಕರಿ ಮಾಲೀಕ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಮಾಧವರಾವ್ ಚೌಧರಿ(35) ಮೃತ ದುರ್ದೈವಿ. ಪಟ್ಟಣದ ವಿದ್ಯಾನಗರದ ಮುಖ್ಯ ರಸ್ತೆಯಲ್ಲಿ ಈ ಬೇಕರಿ ಇದ್ದು, ಮಾಧವರಾವ್ ಕಳೆದ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಬೇಕರಿಯೊಳಗಿದ್ದ ದೀಪದಿಂದ ಬೇಕರಿಯೊಳಗೆ ಬೆಂಕಿ ತಗುಲಿದೆ.
ಸೋಮವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಾಧವರಾವ್ ರಾತ್ರಿ ಪೂಜೆ ಮಾಡಿ, ದೀಪ ಹಚ್ಚಿಟ್ಟು ತಾನೂ ಬೇಕರಿಯಲ್ಲೇ ಮಲಗಿದ್ದರು. ಬೇಕರಿ ಒಳಗಡೆ ಲಾಕ್ ಮಾಡಿ ಮಲಗಿದ್ದ ಮಾಧವರಾವ್ ಸಜೀವ ದಹನವಾಗಿದ್ದಾರೆ. ಬೆಳಗ್ಗಿನ ಜಾವ ಬೇಕರಿಯಿಂದ ಹೊಗೆ ಬರುತ್ತಿದ್ದುದನ್ನು ಕಂಡು ಸ್ಥಳೀಯರು ದೌಡಾಯಿಸಿದ್ದಾರೆ.
ಬಳಿಕ ಸ್ಥಳೀಯರು ಬೇಕರಿಯ ಶೆಟರ್ ಮುರಿದು ಮಾಲೀಕನನ್ನು ಹೊರ ತೆಗೆದರು. ಆದರೆ ಅಷ್ಟರಲ್ಲೇ ಮಾಧವರಾವ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ರಾಜಸ್ಥಾನ ಮೂಲದ ವ್ಯಕ್ತಿ ಮಾಧವರಾವ್ ಈ ಅಂಗಡಿಯನ್ನು ಬಾಡಿಗೆ ಪಡೆದಿದ್ದರು.
ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.