ನವದೆಹಲಿ: ಆಪರೇಷನ್ ಸಿಂಧೂರದ (Operation Sindoor) ಕಾರ್ಯಾಚರಣೆ ವೇಳೆ ಪಾಕ್ನಿಂದ ಬರುತ್ತಿದ್ದ ಕ್ಷಿಪಣಿಗಳನ್ನು ಧ್ವಂಸಗೈದು ಭಾರತವನ್ನು (India) ರಕ್ಷಿಸಿದ್ದ S-400 ವಾಯು ರಕ್ಷಣಾ ಕ್ಷಿಪಣಿಗೆ ಬೇಡಿಕೆ ಹೆಚ್ಚಾಗಿದೆ. ಪಾಕ್ ನಡುವಿನ ಸಂಘರ್ಷದಲ್ಲಿ ಇದರ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ ಭಾರತ ಮತ್ತಷ್ಟು ಹೆಚ್ಚುವರಿ ಘಟಕಗಳನ್ನು ನೀಡುವಂತೆ ಮನವಿ ಮಾಡಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ಉಡಾಯಿಸಿದ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು (Drone) ಪ್ರತಿಬಂಧಿಸುವ ಮತ್ತು ತಟಸ್ಥಗೊಳಿಸುವಲ್ಲಿ ಎಸ್ 400 ನಿರ್ಣಾಯಕ ಪಾತ್ರ ವಹಿಸಿತ್ತು. ಕಾರ್ಯಾಚರಣೆಯ ಬಗ್ಗೆ ಪರಿಚಿತವಾಗಿರುವ ಅಧಿಕಾರಿಗಳ ಪ್ರಕಾರ ಪಶ್ಚಿಮ ಗಡಿಯುದ್ದಕ್ಕೂ ವೈಮಾನಿಕ ಬೆದರಿಕೆಗಳನ್ನು ಎದುರಿಸುವಲ್ಲಿ ಈ ವ್ಯವಸ್ಥೆಗಳು ಹೆಚ್ಚಿನ ನಿಖರತೆ ಪ್ರದರ್ಶಿಸಿತ್ತು.
ಎಸ್ -400 ಕಾರ್ಯಕ್ಷಮತೆಯಿಂದ ತೃಪ್ತಿ ಹೊಂದಿದ ಭಾರತವು ರಷ್ಯಾದಿಂದ ಹೆಚ್ಚಿನ ಘಟಕಗಳನ್ನು ಪಡೆಯುವ ಮೂಲಕ ತನ್ನ ವಾಯು ರಕ್ಷಣಾ ಸಾಮರ್ಥ್ಯಗಳನ್ನು ವಿಸ್ತರಿಸಲು ಮುಂದಾಗಿದೆ. ರಷ್ಯಾ ಮುಂದಿನ ದಿನಗಳಲ್ಲಿ ಈ ಮನವಿಯನ್ನು ಅನುಮೋದಿಸುವ ಸಾಧ್ಯತೆಯಿದೆ ಎಂದು ಮೂಲಗಳು ಸೂಚಿಸಿವೆ.
ರಷ್ಯಾ ನಿರ್ಮಿತ S-400 ವಾಯು ರಕ್ಷಣಾ ವ್ಯವಸ್ಥೆಗಳಿಗೆ – ಭಾರತದಲ್ಲಿ ‘ಸುದರ್ಶನ ಚಕ್ರ’ ಎಂದು ಹೆಸರನ್ನು ಇಡಲಾಗಿದೆ. ವಿಶ್ವದ ಮುಂದುವರಿದ ರಕ್ಷಣಾ ವ್ಯವಸ್ಥೆ ಇದಾಗಿದ್ದು 600 ಕಿಮೀ ದೂರದವರೆಗಿನ ಗುರಿಗಳನ್ನು ಪತ್ತೆಹಚ್ಚುವ ಮತ್ತು 400 ಕಿಮೀ ವ್ಯಾಪ್ತಿಯಲ್ಲಿ ಅವುಗಳನ್ನು ಪ್ರತಿಬಂಧಿಸುವ ಸಾಮರ್ಥ್ಯವನ್ನು ಹೊಂದಿವೆ. ಇದನ್ನೂ ಓದಿ: ಅದಮ್ಪುರದಲ್ಲಿ ಮೋದಿ ವಿಜಯೋತ್ಸವ – ಈ ವಾಯುನೆಲೆಗೆ ಮೋದಿ ಭೇಟಿ ನೀಡಿದ್ದು ಯಾಕೆ?
ಭಾರತವು 2018 ರಲ್ಲಿ ರಷ್ಯಾ ಜೊತೆ ಐದು S-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ 5.43 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಪಾಕಿಸ್ತಾನ ಮತ್ತು ಚೀನಾದಿಂದ ಬರುವ ವೈಮಾನಿಕ ಬೆದರಿಕೆಗಳನ್ನು ಎದುರಿಸಲು 2021 ರಲ್ಲಿ ಪಂಜಾಬ್ನಲ್ಲಿ ಮೊದಲ ಯೂನಿಟ್ ನಿಯೋಜಿಸಲಾಗಿತ್ತು.
ನಾಲ್ಕು ರೀತಿಯ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವಿರುವ S-400 ಯುದ್ಧ ವಿಮಾನಗಳು, ಡ್ರೋನ್ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸಬಹುದು. ಇದರ ಮುಂದುವರಿದ ಹಂತ-ಶ್ರೇಣಿಯ ರಾಡಾರ್ ಏಕಕಾಲದಲ್ಲಿ 100 ಕ್ಕೂ ಹೆಚ್ಚು ಗುರಿಗಳನ್ನು ಟ್ರ್ಯಾಕ್ ಮಾಡುತ್ತದೆ.