ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸರ್ಕಾರ ಈ ತಿಂಗಳ ಸಂಬಳವನ್ನು ಅವರವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದು, ಸರ್ಕಾರಿ ಶಾಲಾ ಶಿಕ್ಷಕರ ಖಾತೆಯಲ್ಲಿಯೇ ಹಣ ಇರುತ್ತದೆ ಅಂತ ತಿಳಿದ ಕಳ್ಳನೋರ್ವ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರಿಗೆ ಕರೆ ಮಾಡಿ ಆನ್ ಲೈನ್ ಮೂಲಕ ಅವರ ಬ್ಯಾಂಕ್ ಖಾತೆಯಲ್ಲಿನ ಹಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.
ಕಳ್ಳನೋರ್ವ ಸರ್ಕಾರಿ ಶಾಲಾ ಶಿಕ್ಷಕರನ್ನೇ ಟಾರ್ಗೆಟ್ ಮಾಡಿ ಕಳೆದ ಎರಡು ದಿನಗಳಿಂದ ಜಿಲ್ಲೆಯ ನೂರಾರು ಮಂದಿ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಕರೆ ಮಾಡಿ, ಅವರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಶಾಲೆಯ ಶ್ರೀನಿವಾಸ್, ಅವರಿಗೆ ಕರೆ ಮಾಡಿ, ಅಚ್ಚ ಕನ್ನಡದಲ್ಲೇ ನಯವಾಗಿ ಮಾತನಾಡಿರುವ ಖದೀಮ ನಾನು ಬ್ಯಾಂಕ್ ಸಿಬ್ಬಂದಿ ರಮೇಶ್ ಮಾತನಾಡುತ್ತಿದ್ದೇನೆ. ನಿಮ್ಮ ಪ್ರಗತಿ ಗ್ರಾಮೀಣ ಬ್ಯಾಂಕ್ನ ಎಟಿಎಂ ಕಾರ್ಡ್ನ ವ್ಯಾಲಿಡಿಟಿ ಮುಗಿದು ಹೋಗಿದೆ. ಹೊಸದಾಗಿ ರಿನಿವಲ್ ಮಾಡಬೇಕು ಅಂತ ಎಟಿಎಂ ಕಾರ್ಡ್ನ 16 ನಂಬರಿನ ಸಂಖ್ಯೆಗಳನ್ನು ಪಡೆದು ನಂತರ ಮೊಬೈಲ್ಗೆ ಬಂದ ಒಟಿಪಿ ನಂಬರ್ ಪಡೆದು ಕ್ಷಣ ಮಾತ್ರದಲ್ಲೇ 5,197 ರೂಪಾಯಿಗಳಂತೆ ಎರಡು ಬಾರಿ 10,390 ರೂಪಾಯಿ ಎಗರಿಸಿದ್ದಾನೆ. ಇದನ್ನೂ ಓದಿ: ಹಿಜಬ್ ಸಂಘರ್ಷ ಮಧ್ಯೆ ಸಾವರ್ಕರ್ ಫೋಟೋ ವಿವಾದ – ವಿದ್ಯಾರ್ಥಿಗಳ ಮೇಲೆ ಹಲ್ಲೆ
ಸೈಬರ್ ಖದೀಮ ಇದೇ ರೀತಿ ನೂರಾರು ಮಂದಿ ಶಿಕ್ಷಕರಿಗೆ ಕರೆ ಮಾಡಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಶಾಲೆಯ ರಮಾ ಎಂಬ ಶಿಕ್ಷಕಿಗೆ ಕರೆ ಮಾಡಿ 35,000 ಎಗರಿಸಿದ್ದಾನೆ. ತದನಂತರ ಗಾಂಧೀಪುರ ಶಾಲೆಯ ಇಂದಿರಾ ಅವರಿಗೆ ಕರೆ ಮಾಡಿ ಅವರ ಖಾತೆಯಲ್ಲಿದ್ದ 42,000, ಶಿಕ್ಷಕ ಆರ್.ಎಸ್.ಎನ್. ಬಾಬು ಅವರ ಖಾತೆಯಲ್ಲಿನ 20,000 ಹಾಗೂ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಕೇಶವಮೂರ್ತಿ ಅವರ ಖಾತೆಯಲ್ಲಿನ 34,000 ಹಣವನ್ನ ದೋಚಿದ್ದಾನೆ. ಇಷ್ಟೇ ಅಲ್ಲದೇ ನಿರಂತರವಾಗಿ ಶಿಕ್ಷಕರನ್ನೇ ಟಾರ್ಗೆಟ್ ಮಾಡಿ ಕರೆ ಮಾಡಿ ಹಲವರ ಖಾತೆಗಳಲ್ಲಿನ ಹಣ ಲೂಟಿ ಮಾಡಿದ್ದಾನೆ.
ಸದ್ಯ ಹಣ ಕಳೆದುಕೊಂಡಿರುವ ಶಿಕ್ಷಕರಾದ ಶ್ರೀನಿವಾಸ್, ರಮಾ, ಆರ್.ಎಸ್.ಎನ್ ಬಾಬು, ಇಂದಿರಾ ಹಾಗೂ ಕೇಶವಮೂರ್ತಿ ಅವರು ಚಿಕ್ಕಬಳ್ಳಾಪುರ ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲಿ 3 ಸ್ಥಾನ ಗೆದ್ದ ಬಿಜೆಪಿ – ಕಾಂಗ್ರೆಸ್ ಗುದ್ದು, ಭಿನ್ನರಿಂದ ದಳಪತಿಗೆ ಶಾಕ್