ಚಂಡೀಗಢ: 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್ ಜೊತೆಗೂಡಿ ಕಂಚು ಗೆದ್ದಿದ್ದ ಸರಬ್ಜೋತ್ ಸಿಂಗ್ (Sarabjot Singh), ತಮ್ಮ ಕೈಗೆ ಬಂದ ಸರ್ಕಾರಿ ಕೆಲಸದ ಆಫರ್ ಅನ್ನು ನಿರಾಕರಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಈ ಜೋಡಿ ಕಂಚು ಗೆದ್ದಿತ್ತು. ಪದಕ ಗೆದ್ದು ಭಾರತಕ್ಕೆ ವಾಪಸ್ ಆದ ಸರಬ್ಜೋತ್ ಸಿಂಗ್ಗೆ ಹರಿಯಾಣ ಸರ್ಕಾರ ಕೆಲಸ ನೀಡಿತು. ಆದರೆ ಕ್ರೀಡಾಪಟು ಸರ್ಕಾರಿ ಕೆಲಸವನ್ನು ತಿರಸ್ಕರಿಸಿದ್ದಾರೆ. ಅದಕ್ಕೆ ಕಾರಣವನ್ನೂ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ ಹಬ್ಬಕ್ಕಿಂದು ಅದ್ಧೂರಿ ತೆರೆ – ಭಾರತದ ಧ್ವಜಧಾರಿಯಾಗಲಿದ್ದಾರೆ ಮನು ಭಾಕರ್
ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಇದು ಸರಿಯಾದ ಸಮಯವಲ್ಲ. ಶೂಟಿಂಗ್ನಲ್ಲಿ ಇನ್ನೂ ನಾನು ಗುರಿ ಸಾಧಿಸಿಲ್ಲ. ಇಂತಹ ಸಮಯದಲ್ಲಿ ಶೂಟಿಂಗ್ ನನ್ನ ಪ್ರಮುಖ ಆದ್ಯತೆ ಎಂದು ಸಿಂಗ್ ತಿಳಿಸಿದ್ದಾರೆ.
ಕೆಲಸ ಚೆನ್ನಾಗಿದೆ. ಆದರೆ ನಾನು ಈಗ ಅದನ್ನು ತೆಗೆದುಕೊಳ್ಳುವುದಿಲ್ಲ. ನಾನು ಮೊದಲು ನನ್ನ ಶೂಟಿಂಗ್ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತೇನೆ. ನನ್ನ ಕುಟುಂಬದವರೂ ನನಗೆ ಯೋಗ್ಯವಾದ ಕೆಲಸ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ನಾನು ಶೂಟಿಂಗ್ ಮುಂದುವರಿಸಲು ಬಯಸುತ್ತೇನೆ. ನಾನು ತೆಗೆದುಕೊಂಡ ನಿರ್ಧಾರಗಳಿಗೆ ವಿರುದ್ಧವಾಗಿ ಹೋಗಲು ನಾನು ಬಯಸುವುದಿಲ್ಲ, ಆದ್ದರಿಂದ ನಾನು ಈಗ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸರಬ್ಜೋತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕ್ಷಮಿಸಿ.. ಆದರೆ ನಾವು ನಿಯಮ ಪಾಲಿಸಲೇಬೇಕು: ಫೋಗಟ್ ಅನರ್ಹತೆ ಬಗ್ಗೆ ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್ ಪ್ರತಿಕ್ರಿಯೆ
ನನ್ನ ಮುಖ್ಯ ಗುರಿಯನ್ನು ನಾನು ಇನ್ನೂ ಸಾಧಿಸಿಲ್ಲ. ನಾನು ನನ್ನ ಮುಖ್ಯ ಗುರಿಯನ್ನು 2028 ರಲ್ಲಿ ಪೂರ್ಣಗೊಳಿಸುತ್ತೇನೆ. ನಾನು 2028 ರಲ್ಲಿ ಚಿನ್ನಕ್ಕಾಗಿ ಶೂಟ್ ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.