ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ರೂ., 1 ಸಾವಿರ ರೂ. ನೋಟು ಬ್ಯಾನ್ ಮಾಡಿ ಸರಿಸುಮಾರು 2 ವರ್ಷ ಆಗುತ್ತಿದ್ದರೂ ನಗರದಲ್ಲಿ ಹಳೇ ನೋಟು ಬದಲಾವಣೆ ದಂಧೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಇದರಂತೆ ನಗರದಲ್ಲಿ ನೋಟು ಬದಲಾವಣೆ ಮಾಡುತ್ತಿದ್ದ ಗ್ಯಾಂಗನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ರಮೇಶ್, ಸಕಾರಕ್, ಪ್ರಕಾಶ್, ವೆಂಕಟರಾಮ್ ಬಂಧಿತ ಆರೋಪಿಗಳು. ಮಡಿಕೇರಿ ಮೂಲದ ವ್ಯಕ್ತಿಯೊಬ್ಬರಿಂದ ಹಳೇ ನೋಟು ತಂದಿದ್ದ ನಾಲ್ವರು ಇಪ್ಪತ್ತು ಪರ್ಸೆಂಟ್ ಕಮೀಷನ್ಗೆ ಹಳೇ ನೋಟು ಕೊಟ್ಟು ಹೊಸ ನೋಟು ಪಡೆಯುತ್ತಿದ್ದರು.
ನೋಟು ಬದಲಾವಣೆ ದಂಧೆ ಮಾಡುತ್ತಿದ್ದ ಆರೋಪಿಗಳು ಬಿಜೆಪಿ ಸರ್ಕಾರದ ಅವಧಿ ಮುಗಿದ ಬಳಿಕ ಮತ್ತೆ ಹಳೇ ನೋಟು ಚಲಾವಣೆಗೆ ಬರುತ್ತೆ ಎಂದು ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದರು. ಈಗಾಗಲೇ ಹಲವು ಮಂದಿಗೆ ಇದೇ ರೀತಿ ಹೇಳಿ ಮೋಸ ಮಾಡಿದ್ದ ಈ ಗ್ಯಾಂಗ್, ಹಳೆ ನೋಟುಗಳನ್ನು ತೆಗೆದುಕೊಳ್ಳಲು ಸಾಕಷ್ಟು ಗಿರಾಕಿಗಳನ್ನು ಹೊಂದಿದ್ದರು ಎನ್ನಲಾಗಿದೆ.
ನಗರದ ನಂದಿನಿ ಲೇಔಟ್ ಬಸ್ ನಿಲ್ದಾಣದ ಬಳಿ 1,95 ಕೋಟಿ ರೂ. ಹಣ ಬದಲಾವಣೆಗಾಗಿ ಕಾದು ಕುಳಿತಿದ್ದ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ನಗದು ಸಮೇತ ಬಂಧಿಸಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಈ ಗ್ಯಾಂಗಿನ ಪ್ರಮುಖ ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಇಂತಹ ಗ್ಯಾಂಗ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv