ನೆಲ್ಲೂರು: ಸರ್ಕಾರಿ ಆಸ್ಪತ್ರೆಯ ನರ್ಸ್ವೊಬ್ಬರು ಅಪಾಯಕಾರಿ ಕೆಮಿಕಲ್ ಇಂಜೆಕ್ಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.
26 ವರ್ಷದ ಮಮತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ಮಲತಃ ಗುಂಟೂರು ಜಿಲ್ಲೆಯ ನರಸರಪೇಟ್ನ ಕೇಸನಪಲ್ಲಿ ಗ್ರಾಮದವರು. ಮಮತಾ ತಂದೆ ಯೇಸುರತ್ನಂ ಕೆಲವು ವರ್ಷಗಳ ಹಿಂದೆ ಹೆಂಡತಿಯಿಂದ ದೂರವಾಗಿದ್ದರು. ಮಮತಾ ಹಾಗೂ ಸಹೋದರ ಕೋಟೇಶ್ವರ್ ರಾವ್ನನ್ನು ತಾಯಿ ಮಾರ್ತಮ್ಮ ಸಾಕಿ ಬೆಳೆಸಿದ್ದರು. ಸಂಕಷ್ಟದ ನಡುವೆಯೂ ಮಗಳಿಗೆ ಒಳ್ಳೇ ವಿದ್ಯಾಭ್ಯಾಸ ಕೊಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮಮತಾ ನರ್ಸಿಂಗ್ ಪದವಿ ಮುಗಿಸಿದ ಬಳಿಕ ನೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ 11 ತಿಂಗಳ ಗುತ್ತಿಗೆ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರು. ಮೊದಲಿಗೆ ಆಸ್ಪತ್ರೆಗೆ ಸೇರಿದ ವಸತಿ ನಿಲಯದಲಿ ವಾಸವಿದ್ದರು. ಬಳಿಕ ತನ್ನ ಸ್ನೇಹಿತೆಯರಾದ ಭವಾನಿ ಹಾಗೂ ಪದ್ಮಶ್ರೀಯೊಂದಿಗೆ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು.
ಸೋಮವಾರದದು ಕೆಲಸ ಮುಗಿಸಿ ಮನೆಗೆ ಬಂದ ಮಮತಾ ಎಂದಿನಂತೆ ತನ್ನ ಸ್ನೇಹಿತೆಯರೊಂದಿಗೆ ಊಟ ಸೇವಿದ್ದರು. ಸ್ನೇಹಿತೆಯರು ಮಲಗಲು ಹೋದ ಬಳಿಕ ಮಮತಾ ತನ್ನ ಪ್ರಿಯಕರ ತೇಜಾನೊಂದಿಗೆ ಮಾತನಾಡಿದ್ದರು. ಬಳಿಕ ತಾನು ತಂದಿದ್ದ ಸಿರಿಂಜ್ ಹಾಗೂ ಕೆಮಿಕಲ್ ತೆಗೆದುಕೊಂಡು ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಲವೇ ಕ್ಷಣಗಳಲ್ಲಿ ಮಮತಾ ಕುಸಿದು ಬಿದ್ದಿದ್ದಾರೆ. ನಂತರ ನಸುಕಿನ ಜಾವ ಸುಮಾರು 4 ಗಂಟೆ ವೇಳೆಗೆ ಮಮತಾ ಸ್ನೇಹಿತೆಯೊಬ್ಬರು ಹಾಸಿಗೆ ಮೇಲೆ ಬಿದ್ದಿದ್ದ ಮಮತಾರನ್ನು ನೋಡಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮಮತಾರನ್ನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗಾಗಲೇ ತಡವಾಗಿತ್ತು. ಮಮತಾ ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ವಿಷಯ ತಿಳಿದು ಮಮತಾ ತಾಯಿ ಹಾಗೂ ಸಹೋದರ ಕೂಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಸದ್ಯ ಮಮತಾ ತಾಯಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರೇಮ ವೈಫಲ್ಯದಿಂದ ಮಮತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಮತಾ ತಾಯಿ ಫೋನ್ ಮಾಡಿ ಆಕೆಗೆ ಮದುವೆ ನಿಶ್ಚಯಿಸಿರುವುದಾಗಿ ಹೇಳಿದ್ದರು. ಆದ್ರೆ ಈಗಲೇ ಮದುವೆ ಬೇಡ ಎಂದು ಮಮತಾ ತನ್ನ ತಾಯಿಯೊಂದಿಗೆ ವಾದಿಸಿದ್ದರು ಎಂದು ವರದಿಯಾಗಿದೆ.