ದಾವಣಗೆರೆ: ಕೇವಲ ಜಗದ್ಗುರುಗಳ ಫೋನ್ ಅಷ್ಟೇ ಅಲ್ಲ ನನ್ನ ಫೋನ್ ಕೂಡ ಕದ್ದಾಲಿಕೆಯಾಗಿದೆ ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ಶರನ್ನವರಾತ್ರಿ ಧರ್ಮ ಸಮ್ಮೇಳನದ ಹಂದರಗಂಬ ಪೂಜೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಂಭಾಪುರಿ ಜಗದ್ಗುರುಗಳ ಫೋನ್ ಕದ್ದಾಲಿಕೆಯಾಗಿದೆ ಎನ್ನುತ್ತಿದ್ದಾರೆ. ಕೇವಲ ಅವರದ್ದು ಮಾತ್ರವಲ್ಲ ನನ್ನ ಫೋನ್ ಕೂಡ ಕದ್ದಾಲಿಕೆಯಾಗಿದೆ. ಎಲ್ಲರ ಫೋನು ಟ್ಯಾಪ್ ಮಾಡುತ್ತಾರೆ. ಅದರಿಂದ ಏನಾಗುತ್ತದೆ, ಏನೂ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅಷ್ಟೇ ಅಲ್ಲದೆ, ನಮ್ಮ ಮನೆ ಮೇಲೆ ಐಟಿ ದಾಳಿ ಕೂಡ ಆಗಿದೆ. ಒಕ್ಕಲಿಗರ ನಿರಂಜನಾನಂದ ಪುರಿ ಸ್ವಾಮೀಜಿಗಳದ್ದು ಸಹ ಫೋನ್ ಟ್ಯಾಪ್ ಆಗಿದೆ. ಎಲ್ಲರ ಫೋನ್ ಕದ್ದಾಲಿಕೆಯಾಗುತ್ತದೆ ಅದೆಲ್ಲ ಸಾಮಾನ್ಯ. ಏನು ಮಾಡಲು ಸಾಧ್ಯ ಎನ್ನುವ ಮೂಲಕ ಅಸಹಾಯಕತೆ ವ್ಯಕ್ತಪಡಿಸಿದರು.