ಹಾವೇರಿ: ಕಾಂಗ್ರೆಸ್ನವರು ಮಾತ್ರವಲ್ಲ ಬಿಜೆಪಿಯ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಜೈಲಿಗೆ ಹೋಗುವ ಸಮಯ ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರೀ ಸೋನಿಯಾ ಗಾಂಧಿ ಮಾತ್ರವಲ್ಲ ವಿಜಯೇಂದ್ರ ಮತ್ತು ಯಡಿಯೂರಪ್ಪ ಸಹ ಜೈಲಿಗೆ ಹೋಗುತ್ತಾರೆ. ದುಬೈ ಮತ್ತು ಮಾರಿಸಸ್ ನಲ್ಲಿ ಆಸ್ತಿ ಮಾಡಿದ್ದಾರೆ. ಹೀಗಾಗಿ ವಿಜಯೇಂದ್ರ ಆಗಾಗ ದುಬೈ ಮತ್ತು ಮಾರಿಸಸ್ ಗೆ ಹೋಗುತ್ತಾರೆ ಎಂದು ಹೇಳಿದರು.
ಯಡಿಯೂರಪ್ಪ ಆಪ್ತ ಉಮೇಶ್ ಮನೆಯಲ್ಲಿ ಸಿಕ್ಕ ಹತ್ತು ಸಾವಿರ ಕೋಟಿ ರೂಪಾಯಿ ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಸೇರಿದ್ದು. ಸಿಎಂ ಬದಲಾವಣೆ ಎಂಬುದು ಸುಳ್ಳು ಸುದ್ದಿ. ಇದೆ 18ರಂದು ಜೆ.ಪಿ.ನಡ್ಡಾ ಅವರು ರಾಜ್ಯಕ್ಕೆ ಆಗಮಿಸುವ ವೇಳೆ ಈ ಬಗ್ಗೆ ಸ್ಪಷ್ಟ ಸಂದೇಶ ನೀಡಲಿದ್ದಾರೆ. ಕೆಲವು ಸ್ವಾಮೀಜಿಗಳು ಹತ್ತು ಕೋಟಿ ರೂ. ಹೊಡೆದು ಮೀಸಲಾತಿ ಹೋರಾಟ ಮಾಡುವುದನ್ನು ಬಿಟ್ಟು ಸುಮ್ಮನಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೈಸೂರಿನಲ್ಲಿ ಮೋದಿ 2 ದಿನ- ಎಲ್ಲೆಲ್ಲಿಗೆ ಭೇಟಿ..?, ಕಾರ್ಯಕ್ರಮಗಳೇನು..?
ಹತ್ತು ಕೋಟಿ ಹೊಡೆದು ಬೊಮ್ಮಾಯಿಯವರೇ ಗಡಿಬಿಡಿ ಮಾಡಬೇಡಿ, ಬೇಗನೆ ಕೊಡಬೇಡಿ ಅಂದಿದ್ದಾರೆ. ಏರ್ ಕಂಡೀಷನ್ ರೂಮಿನಲ್ಲಿ ಕುಳಿತಿದ್ದಾರೆ. ನಮ್ಮ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಂತೆ ಎಂದೂ ಕಟ್ಟಕಡೆಯ ಹಳ್ಳಿಗೆ ಹೋಗಿ ಹೋರಾಟ ಮಾಡಿಲ್ಲ. ಶೀಘ್ರವೆ ಮಠದ ಹತ್ತು ಕೋಟಿ ರೂ. ಹಗರಣ ಬೆಳಕಿಗೆ ಬರಲಿದೆ. ಯಡಿಯೂರಪ್ಪ ಮಠಕ್ಕೆ ಹತ್ತು ಕೋಟಿ ಕೊಟ್ಟು ಸಮಾಜವನ್ನು ಖರೀದಿ ಮಾಡಿದ್ದೇವೆ ಅಂತಾ ತಿಳ್ಕೊಂಡಿದ್ದರು. ಅವರದ್ದು ಹೊರಗೆ ಬರಲಿದೆ. ಈಗ ಅವರ ಜೊತೆ ಅವರು ಅಂದುಕೊಂಡಂತೆ ಲಿಂಗಾಯತ ಸಮಾಜವಿಲ್ಲ. ಕೆಲವು ಪರ್ಸೆಂಟ್ ಮಾತ್ರ ಇದೆ. ನಮ್ಮ ಸ್ವಾಮೀಜಿಗಳ ಹೋರಾಟ ಜೋರಾಗುತ್ತಿದ್ದಂತೆ ನಿನ್ನೆ ಸಿಎಂ ಅವರಿಗೆ ಗಡಿಬಿಡಿ ಮಾಡಬೇಡಿ ಅಂದವರೆ ನಿನ್ನೆ ಮನವಿ ಪತ್ರ ನೀಡಿದ್ದಾರೆ ಅಂತಾ ಪರೋಕ್ಷವಾಗಿ ವಚನಾನಂದ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾನೇನು ಮಂತ್ರಿ ಆಗಬೇಕು ಅಂದವನಲ್ಲ. ಸಿಎಂ ಅವರು ಯತ್ನಾಳರೇ ಮಂತ್ರಿ ಸ್ಥಾನದ ಪಟ್ಟಿಯಲ್ಲಿ ನಿಮ್ಮ ಹೆಸರೇ ಮೊದಲಿದೆ ಅಂದಿದ್ದಾರೆ. ಆದರೆ ನನಗೆ ಮಂತ್ರಿ, ಉಪಮುಖ್ಯಮಂತ್ರಿ, ಹತ್ತು ಖಾತೆ ಕೊಟ್ಟರೂ ಬೇಡ. ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿ ಸಾಕು ಅಂದಿರುವೆ. 2ಎ ಮೀಸಲಾತಿ ಕೊಟ್ಟರೆ ನಮ್ಮ ಸಮಾಜ ಬಿಜೆಪಿ ಪರ. ಇಲ್ಲದಿದ್ದರೆ ನಿನ್ನೆ ಬೆಳಗಾವಿ ರಿಸಲ್ಟ್ ನೋಡಿದ್ದೀರಲ್ಲ. ಸಿಎಂ ಬಸವರಾಜ ಬೊಮ್ಮಾಯಿಯವರ ಮೇಲೆ ನಮಗೆ ವಿಶ್ವಾಸವಿದೆ. ಈ ತಿಂಗಳು 22ರಂದು ಮೀಸಲಾತಿ ಸಂಬಂಧ ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
22ರ ನಂತರ ಹೋರಾಟದ ರೂಪುರೇಷೆ ಬಗ್ಗೆ ನಿರ್ಣಯ ಆಗಲಿದೆ. ಬ್ರಿಟನ್ ರಾಣಿಯ ನಂತರ ಸೋನಿಯಾ ಗಾಂಧಿಯೇ ದೊಡ್ಡ ಶ್ರೀಮಂತೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆ ಮಾಡಲು ಕೇಂದ್ರ ಸರ್ಕಾರ ಒತ್ತಡ ಹಾಕಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಇಡಿ ತನಿಖೆ ನಡೆಯುತ್ತಿದೆ.