ಹಾಸನ: ಕಾಲಿಗೆ ಗಾಯವಾಗಿರುವ ಕಾಡಾನೆ ನರಳಾಟ ನೋಡಿ ಸೂಕ್ತ ಚಿಕಿತ್ಸೆ ನೀಡದ ಅರಣ್ಯ ಇಲಾಖೆ ವಿರುದ್ಧ ವನ್ಯಜೀವಿ ಪ್ರಿಯರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಒಂಟಿ ಸಲಗದ ಹಿಂಬದಿಯ ಎಡಗಾಲಿಗೆ ಗಾಯವಾಗಿ ನರಳುತ್ತಿದೆ. ಆಲೂರು-ಸಕಲೇಶಪುರ ಭಾಗದ ಜನರು ಈ ಕಾಡಾನೆಗೆ ‘ಭೀಮ’ ಎಂದು ನಾಮಕರಣ ಮಾಡಿದ್ದರು. ಈ ಆನೆ ಗ್ರಾಮದೊಳಗೆ ಬಂದರೂ ಯಾರಿಗೂ ಯಾವುದೇ ತೊಂದರೆ ಮಾಡದೇ ಓಡಾಡಿಕೊಂಡಿತ್ತು.
ಗ್ರಾಮದಲ್ಲಿ ಓಡಾಡಿಕೊಂಡಿದ್ದ ಭೀಮನಿಗೆ ಶೀಘ್ರ ಚಿಕಿತ್ಸೆ ನೀಡಿ ಎಂದು ಜನರು ಒತ್ತಾಯಿಸುತ್ತಿದ್ದಾರೆ. ಸದ್ಯ ಭೀಮ ಸಕಲೇಶಪುರ ತಾಲೂಕಿನಲ್ಲಿ ಕುಂಟುತ್ತಲೇ ಓಡಾಡುತ್ತಿದೆ. ಕೆಲ ತಿಂಗಳ ಹಿಂದೆ ಕಾಲಿಗೆ ಗಾಯವಾಗಿ ಗುಣವಾಗದೇ ಕಾಡಾನೆಯೊಂದು ಮೃತಪಟ್ಟಿತ್ತು.
ಮರಿಯನ್ನು ಬಿಟ್ಟು ಮೃತಪಟ್ಟ ಆನೆಗೆ ಅಧಿಕಾರಿಗಳು ಚಿಕಿತ್ಸೆ ನೀಡುವ ಯತ್ನ ಮಾಡಿ ವಿಫಲರಾಗಿದ್ದರು. ಈ ಆನೆಗೂ ಅದೇ ಸ್ಥಿತಿ ಬರುವ ಮುನ್ನ ಚಿಕಿತ್ಸೆ ನೀಡಲು ಒತ್ತಾಯಿಸುತ್ತಿದ್ದಾರೆ. ಸಲಗನ ಮೂಕ ರೋಧನೆಗೆ ಜನರು ಮರುಗುತ್ತಿದ್ದಾರೆ.