ಹುಬ್ಬಳ್ಳಿ: ಒಂದೆಡೆ ಶಿಥಿಲಾವಸ್ಥೆ ತಲುಪಿರುವ ಕಟ್ಟಡ, ಆ ಕಟ್ಟಡದೊಳಗೆ ಆತಂಕದಲ್ಲಿ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು. ಇದು ವಾಣಿಜ್ಯ ನಗರಿ ಹುಬ್ಬಳ್ಳಿಯ ವಿದ್ಯಾನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ದುಸ್ಥಿತಿ.
ಈ ತರಬೇತಿ ಕೇಂದ್ರ 1957 ರಲ್ಲಿ ಪ್ರಾರಂಭವಾಗಿದೆ. ಅಂದಿನಿಂದ ಇಂದಿನವರೆಗೂ ವಿದ್ಯಾರ್ಥಿಗಳು ನಿರಂತರವಾಗಿ ತಾಂತ್ರಿಕ ಶಿಕ್ಷಣವನ್ನು ಕಲಿಯುತ್ತಿದ್ದಾರೆ. ಆದರೆ ಕಟ್ಟಡ ಮಾತ್ರ ಶಿಥಿಲಾವಸ್ಥೆ ತಲುಪುತ್ತಿದೆ. ಇದನ್ನೂ ಓದಿ: ಬ್ಯಾಂಕಾಕ್ಗೆ ಹಾರಿದ ಮೋಹಕ ತಾರೆ ರಮ್ಯಾ: ಫೋಟೋ ವೈರಲ್
ಸುರಿಯುತ್ತಿರುವ ಗಾಳಿ ಮಳೆಗೆ, ಕಾರ್ಯಗಾರದ ಮೇಲ್ಛಾವಣಿ ಹಾರಿ ಹೋಗಿದೆ. ಕಿಟಕಿ ಗಾಜುಗಳು ಒಡೆದ ಪರಿಣಾಮ, ಮಳೆ ಬಂದಾಗ ನೀರು ಕಾರ್ಯಾಗಾರಕ್ಕೆ ನುಗ್ಗುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳ ಪ್ರಾಯೋಗಿಕ ತರಬೇತಿ ಮಾಡುವಾಗ ಯಂತ್ರಗಳು ಸಹ ಕೈಕೊಡುತ್ತಿವೆ. ಈ ಕಾಲೇಜಿಗೆ ಹುಬ್ಬಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಎಂಜಿನಿಯರಿಂಗ್, ಡಿಪ್ಲೊಮಾ ಕನಸನ್ನು ಹೊತ್ತಿರುವ ಬಡ ವಿದ್ಯಾರ್ಥಿಗಳು, ಆರ್ಥಿಕ ಸಮಸ್ಯೆಯಿಂದ ಐಟಿಐ ಕಡೆ ಗಮನ ನೀಡುತ್ತಾರೆ. ಮೊದಲೇ ಅಸಹಾಯಕ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಈ ಅವ್ಯವಸ್ಥೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
1,200 ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದು, ಇವರಿಗೆ ಬೇಕಾದ ಸುಸಜ್ಜಿತ ಕಟ್ಟಡಗಳಿಲ್ಲದೇ ಹಳೆಯ 12 ಕೊಠಡಿಗಳಲ್ಲಿ ಪಾಠಗಳನ್ನು ಮಾಡಲಾಗುತ್ತಿದೆ. ಇಷ್ಟೇ ಅಲ್ಲದೇ ಕಾಲೇಜಿಗೆ ಪ್ರಮುಖವಾಗಿ ಬೇಕಾಗಿರುವ ಸಭಾಂಗಣ, ಉಪನ್ಯಾಸಕರ ವಿಶ್ರಾಂತಿ ಕೊಠಡಿ, ಮೈದಾನ, ಕುಡಿಯುವ ನೀರು ಸೇರಿದಂತೆ ಇನ್ನಿತರ ನೂನ್ಯತೆಗಳು ಸಹ ಇಲ್ಲಿವೆ. ಇನ್ನೂ ಕಾಲೇಜಿಗೆ ಹೋಗಲು ಸರಿಯಾದ ಮುಖ್ಯರಸ್ತೆಯೂ ಇಲ್ಲದಾಗಿದೆ.