– ಜನಪ್ರಿಯತೆಗೆ ಎಲ್ಲಿ, ಏನು ಬೇಕಾದ್ರೂ ರೆಕಾರ್ಡ್ ಮಾಡಿ ಲೀಕ್ ಮಾಡ್ತಾರೆ
ಯಾದಗಿರಿ: ವಾಟ್ಸಪ್, ಫೇಸ್ಬುಕ್ ಬಂದಮೇಲೆ ಯಾರಿಗೂ ಪ್ರೈವಸಿ ಇಲ್ಲ. ಹೆಂಡತಿ ಜೊತೆ ಮಾತನಾಡಬೇಕಾದರೂ ಎಚ್ಚರಿಕೆಯಿಂದ ಮಾತನಾಡಬೇಕಾದ ಪರಿಸ್ಥಿತಿ ಇದೆ. ನಮ್ಮವರೇ ಆಡಿಯೋ ರಿಲೀಸ್ ಮಾಡಿದ್ದಾರೆ ಎಂದು ಬಿಎಸ್ವೈ ಆಡಿಯೋ ಪ್ರಕರಣದ ಬಗ್ಗೆ ಸುರಪುರ ಬಿಜೆಪಿ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರಾಜುಗೌಡ ಸಿಎಂ ಯಡಿಯೂರಪ್ಪ ಆಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಸಿದರು. ಈಗ ಹೆಂಡತಿ ಜೊತೆ ಮಾತನಾಡುವಾಗಲು ಎಚ್ಚರಿಕೆಯಿಂದ ಇರಬೇಕಾಗಿದೆ. ವಾಟ್ಸಪ್, ಫೇಸ್ಬುಕ್ ಬಂದಮೇಲೆ ಯಾರಿಗೂ ಪ್ರೈವಸಿ ಇಲ್ಲ. ಹಾಗೆಯೇ ರಾಜಕೀಯ ಪಕ್ಷದ ನಾಯಕರಿಗೆ ಅವರ ಮನದಾಳದ ಮಾತು ಹೇಳಲು ಪ್ರೈವಸಿ ಇಲ್ಲ. ಸ್ವಲ್ಪ ಜನಪ್ರಿಯತೆ ಗಳಿಸಲು ಎಲ್ಲಿಬೇಕಾದರೂ, ಏನು ಬೇಕಾದರೂ ರೆಕಾರ್ಡ್ ಮಾಡಿ ಲೀಕ್ ಮಾಡುತ್ತಾರೆ. ಬಿಜೆಪಿ ಅವರು ಮಾತ್ರ ಸಭೆಯಲ್ಲಿದ್ದಿದ್ದು, ಹೀಗಾಗಿ ನಮ್ಮವರೇ ಯಾರೋ ಬಿಎಸ್ವೈ ಆಡಿಯೋ ಲೀಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ
ಮೈತ್ರಿ ಸರ್ಕಾರದ ಅವಧಿಯಲ್ಲಿ ಪ್ರಸನ್ನಾನಂದಪುರಿ ಸ್ವಾಮಿಜಿ ಫೋನ್ ಕದ್ದಾಲಿಕೆ ನಡೆದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಭಯೋತ್ಪಾದಕರು, ನಕ್ಸಲರ ಫೋನ್ ಟ್ಯಾಪ್ ಮಾಡಬೇಕು. ಆದರೆ ಎಚ್ಡಿಕೆ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದಾರೆ. ರಾಜಕೀಯ, ಸ್ವಾರ್ಥಕ್ಕಾಗಿ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.
ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಸಿಬಿಐ ತನೆಖೆಯಿಂದ ಸತ್ಯ ಬೆಳಕಿಗೆ ಬರುತ್ತದೆ. ಕುಮಾರಸ್ವಾಮಿ ಅವರು ತಮ್ಮ ಸಮುದಾಯದ ಗುರುಗಳ ಫೋನನ್ನೇ ಕದ್ದಾಲಿಕೆ ಮಾಡಿದ್ದಾರೆ. ಇನ್ನು ಬೇರೆ ಸಮುದಾಯದ ಸ್ವಾಮಿಗಳ ಫೋನ್ ಟ್ಯಾಪ್ ಮಾಡದೆ ಇರುತ್ತಾರಾ ಎಂದು ಪ್ರಶ್ನೆ ಹಾಕಿದ್ದಾರೆ. ಹಾಗೆಯೇ ಕುಮಾರಸ್ವಾಮಿ ರಾಜಕೀಯ ಮಾಡಲಿ, ಆದರೆ ಕದ್ದಾಲಿಕೆ ಮಾಡಿದ್ದು ಸರಿಯಲ್ಲ. ಫೋನ್ ಕದ್ದಾಲಿಕೆ ಮಾಡಿದರೂ ಕುಮಾರಸ್ವಾಮಿ ಸರ್ಕಾರ ಉಳಿಯಲಿಲ್ಲ. ಅವರು ಜನರ ಹೃದಯ, ಶಾಸಕರ ಹೃದಯ ಗೆದ್ದಿದ್ದರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ. ಫೋನ್ ಟ್ಯಾಪ್ ಮಾಡುವ ಬದಲು ಜನರ ಸಮಸ್ಯೆಗಳನ್ನ ಟ್ಯಾಪ್ ಮಾಡಬೇಕಿತ್ತು ಎಂದು ಕಾಲೆಳೆದಿದರು.