ಕೊಪ್ಪಳ: ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಪದೇ ಪದೇ ಈ ಬಗ್ಗೆ ಚರ್ಚೆಯಾಗ್ತಿದೆ. ಆದ್ರೆ, ಈವರೆಗೂ ರಾಜ್ಯದ ಯಾವೊಬ್ಬ ರೈತನ ಸಾಲವೂ ಮನ್ನಾ ಆಗಿಲ್ಲ.
ಸತತ ಹೋರಾಟದ ನಂತರ ಸಿಎಂ ಕುಮಾರಸ್ವಾಮಿ ಇತ್ತೀಚೆಗಷ್ಟೇ ಸಹಕಾರಿ ಬ್ಯಾಂಕ್ ನಲ್ಲಿನ ಬೆಳೆ ಸಾಲ ಮನ್ನಾ ಆದೇಶ ಮಾಡಿದ್ರು. ಶುಕ್ರವಾರ ಸಿಎಂ ಕುಮಾರಸ್ವಾಮಿ ರಾಷ್ಟ್ರೀಕೃತ ಬ್ಯಾಂಕ್ ನ ಸಾಲವನ್ನೂ ಮನ್ನಾ ಮಾಡುವ ಬಗ್ಗೆಯೂ ಆದೇಶ ಮಾಡಿದ್ದಾರೆ. ಆದ್ರೆ, ಸರ್ಕಾರ ಸಹಕಾರಿ ಬ್ಯಾಂಕ್ನ ಸಾಲ ಮನ್ನಾದ ಆದೇಶ ಹೊರಡಿಸಿ ಬರೋಬ್ಬರಿ 12 ದಿನ ಕಳೆದರೂ ಬ್ಯಾಂಕ್ ಅಧಿಕಾರಿಗಳು ಮಾತ್ರ ನಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ.
ಹೌದು. ಕೊಪ್ಪಳದ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ರೈತರು ಇದೀಗ ಬ್ಯಾಂಕ್ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಳ್ತಿದ್ದಾರೆ. ಅನ್ನದಾತರು ತಮ್ಮ ಸಾಲದ ದಾಖಲಾತಿ ಪ್ರದರ್ಶಿಸಿದ್ರೂ, ಇದ್ಯಾವುದೂ ನಮಗೆ ಸಂಬಂಧವಿಲ್ಲ ಎನ್ನುವಂತೆ ಬ್ಯಾಂಕ್ ಅಧಿಕಾರಿಗಳು ಕುಳಿತಿದ್ದಾರೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಸಾಲಮನ್ನಾ ಗಿಫ್ಟ್!
ಇದೇ ತಿಂಗಳ 14 ರಂದು, ಮೊದಲ ಹಂತದಲ್ಲಿ ಕೃಷಿಪತ್ತಿನ ಸಹಕಾರಿ ಬ್ಯಾಂಕ್ನಲ್ಲಿನ ಅಲ್ಪಾವಧಿ ಬೆಳೆ ಸಾಲಮನ್ನಾ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ರು. ಒಂದೇ ವಾರದಲ್ಲಿ ಎಲ್ಲ ಸಹಕಾರಿ ಬ್ಯಾಂಕ್ ಅಧಿಕೃತ ಆದೇಶ ಪತ್ರ ತಲುಪಿಸಿ, ರೈತರಿಗೆ ಋಣಮುಕ್ತ ಪತ್ರ ನೀಡುವ ಭರವಸೆ ನೀಡಿದ್ರು. ಆದ್ರೆ, ಸಿಎಂ ಆದೇಶ ಮಾಡಿ 12 ದಿನ ಕಳೆದರೂ, ನಮಗೆ ಈ ಬಗ್ಗೆ ಯಾವುದೇ ಆದೇಶ ಬಂದಿಲ್ಲ ಅಂತ ಕೃಷಿಪತ್ತಿನ ಸಹಕಾರಿ ಬ್ಯಾಂಕ್ ಸಿಇಒ ರಾಘವೇಂದ್ರ ಹೇಳಿದ್ದಾರೆ.
ಸಹಕಾರಿ ಬ್ಯಾಂಕ್ನಲ್ಲಿನ ಸಾಲಮನ್ನಾಕ್ಕೆ ಸರ್ಕಾರ ಹಲವು ಷರತ್ತು ವಿಧಿಸಿದ್ದು, ಇದರಿಂದ ರೈತರು ಸಾಲ ಮರುಪಾವತಿ ಮತ್ತು ರಿನಿವಲ್ ಮಾಡಿಕೊಳ್ಳುವ ಗೊಂದಲದಲ್ಲಿದ್ದಾರೆ. ಇತ್ತ ಅಧಿಕಾರಿಗಳ ಮಾತಿನಿಂದಲೂ ಅನ್ನದಾತರು ಸಂಕಷ್ಟಕ್ಕೀಡಾಗಿದ್ದಾರೆ.
ರಾಜ್ಯಾದ್ಯಂತ ಒಟ್ಟು 21 ಡಿಸಿಸಿ ಬ್ಯಾಂಕ್ ವ್ಯಾಪ್ತಿಯ 5312 ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ಗಳಿದ್ದು, ಸುಮಾರು 22 ಲಕ್ಷಕ್ಕೂ ಹೆಚ್ಚು ರೈತರು ಸಾಲಮನ್ನಾ ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv