ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ಜಾಗ ಇಲ್ಲ ಎಂದು ಬಿಬಿಎಂಪಿ ಸ್ಪಷ್ಟ ಪಡಿಸಿದೆ. ಬಿಬಿಎಂಪಿ ಮಾಸಿಕ ಪಾಲಿಕೆ ಸಭೆಯಲ್ಲಿ ಜಾಗ ನೀಡದಿರಲು ತೀರ್ಮಾನವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ನೂತನ ಕಟ್ಟಡ ಕಟ್ಟಲು ಕಳೆದ ಹಲವು ವರ್ಷಗಳಿಂದ ಜಾಗಕ್ಕಾಗಿ ಗುತ್ತಿಗೆಗೆ ಆಧಾರದಲ್ಲಿ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಸದ್ಯ ಯಾವುದೇ ಜಾಗ ನೀಡಲು ಅವಕಾಶ ಇಲ್ಲ ಎಂಬ ತೀರ್ಮಾನ ಬಿಬಿಎಂಪಿಯಿಂದ ಹೊರಬಿದ್ದಿದೆ.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ ಬಳಿ ಇರುವ ಜಾಗವನ್ನು ಕನ್ನಡ ಸಾಹಿತ್ಯ ಪರಿಷತ್ 5 ವರ್ಷಗಳ ಗುತ್ತಿಗೆಗೆ ಕೇಳಿತ್ತು. ಈಗ ಸದ್ಯಕ್ಕೆ ನ್ಯಾಷನಲ್ ಕಾಲೇಜು ಬಳಿ 8 ಸಾವಿರ ಅಡಿಗಳಷ್ಟು ಜಾಗ ಖಾಲಿ ಇದೆ. ಆದರೆ ಅದು ಪಾರ್ಕ್ ಅಭಿವೃದ್ಧಿಗಾಗಿ ಉಳಿಸಿಕೊಂಡ ಜಾಗ ಎಂದು ಪಾಲಿಕೆ ಸ್ಪಷ್ಟಪಡಿಸಿದೆ.
ನಗರದ ಸುಂಕೇನಹಳ್ಳಿ ವಾರ್ಡ್ ನಲ್ಲಿದ್ದ ಜಾಗವನ್ನ ಗುತ್ತಿಗೆ ನೀಡಲು ಸಾಧ್ಯವಿಲ್ಲ ಎಂದು ಪ್ರಸ್ತಾವನೆಯನ್ನ ತಿರಸ್ಕರಿಸುವಂತೆ ಅಧಿಕೃತ ಪತ್ರ ವ್ಯವಹಾರ ಸಹ ನಡೆದಿದೆ. ಇದು ಪರಿಷತ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.