ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಮಂಗಳವಾರ ಕರ್ನಾಟಕ ಬಂದ್ ಗೆ ಘೋಷಣೆ ನೀಡಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಇಂದು ಮಧ್ಯಾಹ್ನ ಯೂಟರ್ನ್ ಹೊಡೆದಿದ್ದಾರೆ. ಬಂದ್ ಮುಂದೂಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ಕುಂಭ ಮೇಳ, ಮಹಾಮಸ್ತಾಕಾಭಿಷೇಕ, ಯಲಹಂಕದಲ್ಲಿ ಏರ್ ಶೋ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಿವೆ. ಹಾಗಾಗಿ ಬಂದ್ ಮುಂದೂಡಲು ನಿರ್ಧರಿಸಲಾಗಿದೆ. ಯಾರಿಗೂ ಹೆದರಿಕೊಂಡು ಬಂದ್ ರದ್ದು ಮಾಡಿಲ್ಲ. ನಾವು ಯಾರ ಬೆಂಬಲವನ್ನು ಕೇಳಲ್ಲ, ಬದಲಾಗಿ ತೆಗೆದುಕೊಳ್ಳುತ್ತೇವೆ. ಫೆಬ್ರವರಿ 19ರಂದು ಕರಾಳ ದಿನ ಆಚರಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಶನಿವಾರ ವಾಟಾಳ್ ನಾಗರಾಜ್ ಘೋಷಣೆಗೆ ಬಹುತೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ವಾಟಾಳ್ ನಾಗರಾಜ್ ಮಾತು ಮಾತಿಗೆ ಬಂದ್ ಬಂದ್ ಎಂದು ಹೇಳ್ತಾರೆ. ಇತ್ತೀಚಿನ ದಿನಗಳಲ್ಲಿ ಬಂದ್ ನ ಸಿರೀಯಸ್ ನೆಸ್ ಇಲ್ಲದಂತೆ ಮಾಡಿದ್ದಾರೆ. ನಾವು ಯಾವುದೇ ಕಾರಣಕ್ಕೂ ಬಂದ್ ಗೆ ಬೆಂಬಲ ನೀಡಲ್ಲ. ಎಲ್ಲದಕ್ಕೂ ಬಂದ್ ಅಂತ ಅವರು ಹೇಳಿದ್ರೆ ಸಾರ್ವಜನಿಕರ ಸ್ಥಿತಿ ಏನಾಗಬೇಕು. ಇದೂವರೆಗೂ ನಮ್ಮನ್ನು ಯಾರು ಸಂಪರ್ಕ ಮಾಡಿಲ್ಲ. ಹಾಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಬಂದ್ ಗೆ ಬೆಂಬಲ ನೀಡಲ್ಲ ಎಂದು ಕರವೇ ನಾರಾಯಣಗೌಡರು ವಿರೋಧ ವ್ಯಕ್ತಪಡಿಸಿದ್ದರು.
ವಾಟಾಳ್ ನಾಗರಾಜ್ ಅವರ ಘೋಷಿಸಿದ್ದ ಬಂದ್ ಗೆ ಚಲನಚಿತ್ರ ಮಂಡಳಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ, ಎಐಟಿಯುಸಿ, ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಮತ್ತು ಹೋಟೆಲ್ ಅಸೋಸಿಯೇಷನ್ ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿರಲಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv