ನವದೆಹಲಿ: ಇಂತಹ ಉತ್ತಮ ಸಮಯ ಕಳೆದುಕೊಂಡರೆ ಮತ್ತೆ ಸಿಗಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಮಂತ್ರಿ ಸ್ಥಾನಕ್ಕೆ ನರೇಂದ್ರ ಮೋದಿಯವರ (Narendra Modi) ಹೆಸರನ್ನು ಅನುಮೋದಿಸಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ಎನ್ಡಿಎ ಒಕ್ಕೂಟ ಸಂಸದರ ಸಭೆಯಲ್ಲಿ ಎಲ್ಲಾ ನಾಯಕರು ಮೋದಿ ಹೆಸರನ್ನೇ ಪ್ರಧಾನಿ ಸ್ಥಾನಕ್ಕೆ ಸೂಚಿಸಿದ್ದಾರೆ. ಬಳಿಕ ಮಾತನಾಡಿದ ಜೆಡಿಯು ನಾಯಕ ನಿತೀಶ್ ಕುಮಾರ್ (Nitish Kumar), ಇಂಡಿಯಾ ಬೆಳೆಯುತ್ತಿದೆ. ಉತ್ತಮ ನಾಯಕ, ಉತ್ತಮ ಸಮಯ ಮತ್ತೆ ಸಿಗುವುದಿಲ್ಲ. ಇದು ನಮಗೆ ಉತ್ತಮ ಅವಕಾಶ. ಈಗ ಇದನ್ನು ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ ಎಂದು ಹೇಳಿದರು.
ಮೋದಿಯವರು ದೇಶದ ಸೇವೆ ಮಾಡಿದ್ದಾರೆ, ಮುಂದಿನ ಅವಧಿಯಲ್ಲಿ ಏನು ಬಾಕಿ ಉಳಿದಿದೆಯೋ ಅದನ್ನೂ ಮಾಡಲಿದ್ದಾರೆ. ಮೋದಿ ಅವರಿಗೆ ಈಗ ಮತ್ತೊಂದು ಅವಕಾಶ ಸಿಕ್ಕಿದೆ. ಅಲ್ಲೂ ಇಲ್ಲೂ ಕೆಲವರು ಗೆದ್ದಿದ್ದಾರೆ. ಆದರೆ ಮುಂದಿನ ಬಾರಿ ಎಲ್ಲರೂ ಸೋಲಲಿದ್ದಾರೆ ಎಂದು ನಿತೀಶ್ ಕುಮಾರ್ ಹೇಳಿದರು. ಈ ವೇಳೆ ಮೋದಿ ಸಹಿತ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಇದನ್ನೂ ಓದಿ: ಭಾರತದ ಇತಿಹಾಸದಲ್ಲಿ ಯಾವುದೇ ಚುನಾವಣಾ ಪೂರ್ವ ಮೈತ್ರಿ ಸಫಲವಾಗಿಲ್ಲ, ನಾವು ಸಾಧನೆ ಮಾಡಿದ್ದೇವೆ: ಎನ್ಡಿಎ ಕೊಂಡಾಡಿದ ಮೋದಿ
ಬಿಹಾರದಲ್ಲಿ ಏನು ಬಾಕಿ ಉಳಿದಿದೆ ಅದನ್ನು ಕೂಡ ಮೋದಿಯವರು ಮಾಡಲಿದ್ದಾರೆ. ಅದಕ್ಕಾಗಿ ನಾವು ಎಲ್ಲಾ ಬೆಂಬಲ ನೀಡಿದ್ದೇವೆ. ಆದಷ್ಟು ಬೇಗ ಅವರು ಪ್ರಧಾನಿಯಾಗಲಿ. ಇವತ್ತೆ ಪ್ರಧಾನಿಯಾಗಬೇಕಿತ್ತು. ಆ ಕಡೆ ಈ ಕಡೆ ಹೋಗುವವರಿಗೆ ಯಾವುದೇ ಲಾಭ ಇಲ್ಲ ಎಂದು ಇದೇ ವೇಳೆ ನಿತೀಶ್ ಕುಮಾರ್ ಇಂಡಿಯಾ ಒಕ್ಕೂಟಕ್ಕೆ ಟಾಂಗ್ ಕೊಟ್ಟರು.
ಹೆಸರು ಅನುಮೋದನೆ ಬಳಿಕ ನಿತೀಶ್ ಕುಮಾರ್ ಅವರು ಮೋದಿ ಕಾಲಿಗೆ ನಮಸ್ಕರಿಸಲು ಹೋದರು. ಈ ವೇಳೆ ಮೋದಿಯವರು ಕಾಲು ಮುಟ್ಟಿಸಿಕೊಳ್ಳಲು ನಿರಾಕರಿಸಿದ ಪ್ರಸಂಗ ಕೂಡ ನಡೆಯಿತು.