ಮದ್ವೆಗೆ ಹೋಗುತ್ತಿದ್ದ ಐಷರಾಮಿ ಬಸ್, ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ – 9 ಮಂದಿ ದುರ್ಮರಣ

Public TV
1 Min Read
GUJARATH

ಗಾಂಧಿನಗರ: ಐಷರಾಮಿ ಬಸ್ ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದು, 15ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ ನ ಕುಚ್ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಕಂಕುಬೆನ್ ಅನವಾಡಿಯಾ (60), ಪಮಿಬೆನ್ ಅನವಾಡಿಯಾ (55), ಜಿಜಿಯಾಬೆನ್ ಅನವಾಡಿಯಾ (25), ದಯಾಬೆನ್ ಅನಾವಾಡಿಯಾ (35), ಮಾನಬೆನ್ ಅನವಾಡಿಯಾ (50), ನಿಶಬೆನ್ ಅನವಾಡಿಯಾ (17), ರಾಮಬೆನ್ ಅನವಾಡಿಯಾ (60) , ಕಿಶೋರ್ ಅನವಾಡಿಯಾ (10) ಮತ್ತು ವಿಶಾಲ್ ಅನವಾಡಿಯಾ (20) ಎಂದು ಗುರುತಿಸಲಾಗಿದೆ.

GUJARATH 1

ರಾಜ್ಯ ಹೆದ್ದಾರಿ 42 ರ ಯೂರೋ ಸೆರಾಮಿಕ್ ಕಾರ್ಖಾನೆಯ ಬಳಿ ಇಂದು ಬೆಳಿಗ್ಗೆ 10:30 ರ ವೇಳೆಗೆ ಅಪಘಾತ ಸಂಭವಿಸಿದ್ದು, ಇದು ಕುಚ್ ಜಿಲ್ಲೆಯ ಪ್ರಧಾನ ಕಚೇರಿಯಾದ ಭುಜ್ನೊಂದಿಗೆ ಭಚೌ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು ಸೌರಾಷ್ಟ್ರ-ಕುಚ್ ಪ್ರದೇಶದ ಮೂರನೇ ಭೀಕರ ಅಪಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಷರಾಮಿ ಬಸ್ ಕುಚ್ ಗ್ರಾಮದಿಂದ ಸಿಖ್ರಾ ಗ್ರಾಮಕ್ಕೆ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗುತ್ತಿತ್ತು. ಇದರ ವಿರುದ್ಧ ದಿಕ್ಕಿನಿಂದ ಅಂದರೆ ಸಿಖ್ರಾ ಗ್ರಾಮದಿಂದ ಚಾದಾರ್ದಾ ಗ್ರಾಮಕ್ಕೆ ಮದುವೆ ಸಮಾರಂಭಕ್ಕೆಂದು ಪ್ರಯಾಣಿಕರನ್ನು ತುಂಬಿಕೊಂಡು ಟ್ರ್ಯಾಕ್ಟರ್ ತೆರಳುತ್ತಿತ್ತು. ಈ ವೇಳೆ ರಾಜ್ಯ ಹೆದ್ದಾರಿ 42ರಲ್ಲಿ ವೇಗವಾಗಿ ಬಂದ ವಾಹನಗೆಳೆರಡು ಮುಖಾಮುಖಿ ಡಿಕ್ಕಿ ಹೊಡೆದಿದೆ.

ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ. 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಟ್ರ್ಯಾಕ್ಟರ್ ರಸ್ತೆಯಲ್ಲಿ ಸರಿಯಾದ ಮಾರ್ಗದಲ್ಲಿ ಚಲಿಸದೆ ಇದ್ದುದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕ್ಷಕಿ ಭಾವನ ಪಟೇಲ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *