– ಸತತ 8 ದಿನಗಳ ಕಾಲ ಮಂಡ್ಯ ಜಿಲ್ಲೆ ಪ್ರವಾಸ
ಮಂಡ್ಯ: ಕಳೆದ ಬಾರಿಯ ಲೋಕಸಭಾ ಚುನಾವಣೆಯ (Loksabha Election 2019) ವೇಳೆ ಮಂಡ್ಯ ಕ್ಷೇತ್ರ ಅಕ್ಷರಶಃ ರಣರಂಗವಾಗಿತ್ತು, ಈ ರಣರಂಗದ ಚಕ್ರವ್ಯೂಹ ಭೇದಿಸಲು ನಿಖಿಲ್ ಕುಮಾರಸ್ವಾಮಿ ವಿಫಲಾರಾಗಿದ್ದರು. ಇದೀಗ ಮತ್ತೆ ನಿಖಿಲ್ ಮಂಡ್ಯ ರಣರಂಗಕ್ಕೆ ಪ್ರವೇಶ ಮಾಡಲು ವೇದಿಕೆ ಸಜ್ಜಾಗುತ್ತಿದೆ.
ರಾಜ್ಯ ರಾಜಕೀಯದಲ್ಲಿ ಹೆಚ್ಚು ಸೌಂಡ್ ಮಾಡುವ ಜಿಲ್ಲೆ ಮಂಡ್ಯ. ರಾಜ್ಯ ರಾಜಕಾರಣ ಮಾತ್ರವಲ್ಲ ಮಂಡ್ಯ ದೆಹಲಿ ರಾಜಕೀಯದಲ್ಲೂ ಶಬ್ಧ ಮಾಡುತ್ತೆ ಎಂದು ತೋರಿಸಿಕೊಟ್ಟಿದ್ದು, ಕಳೆದ ಲೋಕಸಭಾ ಚುನಾವಣೆ. ಹೌದು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ದೇಶದಲ್ಲಿಯೇ ಅತೀ ಹೆಚ್ಚು ಸೌಂಡ್ ಮಾಡಿತ್ತು. ಇದಕ್ಕೆ ಕಾರಣವಾಗಿದ್ದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ನಡುವಿನ ಸ್ಪರ್ಧೆ. ಇವರಿಬ್ಬರ ನಡುವೆ ನಾಡದ ಲೋಕಸಭಾ ಕುರುಕ್ಷೇತ್ರದಲ್ಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಗೆದ್ದು ಬೀಗಿದ್ರು. ಇನ್ನೂ ಮಂಡ್ಯ ಲೋಕಸಭಾ ಕುರುಕ್ಷೇತ್ರದ ಚಕ್ರವ್ಯೂಹವನ್ನು ಭೇದಿಸಲಾಗದೆ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ (Vidhanasabha Election) ರಾಮನಗರದಿಂದ ಕಣಕ್ಕಿಳಿದು ಅಲ್ಲೂ ಸೋಲು ಕಂಡಿದ್ರು. ಇದೀಗ ಮೊದಲು ಸೋತ ಜಾಗದಲ್ಲೇ ಗೆಲುವು ಕಾಣಬೇಕೆಂದು ನಿಖಿಲ್ ಮತ್ತೆ ಮಂಡ್ಯದಿಂದ ಲೋಕಸಭಾ ಕ್ಷೇತ್ರದಿಂದ ಅಗ್ನಿ ಪರೀಕ್ಷೆ ಎದುರಿಸಲು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ನಿಖಿಲ್ ಕುಮಾರಸ್ವಾಮಿ ಇದೇ ತಿಂಗಳು ಮಂಡ್ಯ ಲೋಕಸಭಾ ಕ್ಷೇತ್ರದ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳ ರೌಂಡ್ಗೆ ನಿಖಿಲ್ ಮುಂದಾಗಿದ್ದಾರೆ. ಇದನ್ನೂ ಓದಿ: ಟೈಮ್ಸ್ ನೌ ಸಮೀಕ್ಷೆ – NDA 366, INDIA 104 ಸೀಟ್: ಕರ್ನಾಟಕದಲ್ಲಿ ಬಿಜೆಪಿ ದಳ ಮೈತ್ರಿಗೆ 23 ಸ್ಥಾನ
ಒಂದೊಂದು ದಿನ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿರುವ ನಿಖಿಲ್, ಇಡೀ ದಿನ ಆ ಕ್ಷೇತ್ರವನ್ನು ಸುತ್ತಲಿದ್ದಾರೆ. ಕಳೆದ ಬಾರಿ ಆದ ತಪ್ಪುಗಳು ಮರುಕಳಿಸಬಾರದೆಂದು ನಿಖಿಲ್ ಎಲ್ಲಾ ಘಟಕದ ಪದಾಧಿಕಾರಿಗಳನ್ನು ಭೇಟಿ ಚರ್ಚೆ ಮಾಡಲಿದ್ದಾರೆ. ಬಿಜೆಪಿ- ಜೆಡಿಎಸ್ ಮೈತ್ರಿಯ ಬಗ್ಗೆಯೂ ಮನವರಿಕೆ ಮಾಡಲಿದ್ದಾರೆ. ನಿಖಿಲ್ ಅವರ ಮಂಡ್ಯ ಲೋಕಸಭಾ ಕ್ಷೇತ್ರದ ಈ ಪ್ರವಾಸದಿಂದ ನಿಖಿಲ್ ಅವರೇ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆಗೋದು ಗ್ಯಾರಂಟಿ ಎಂದು ಮಂಡ್ಯ ರಾಜಕೀಯ ಪಡಸಾಲೆಯಲ್ಲಿ ಈಗಾಗಲೇ ಚರ್ಚೆಗಳು ಆರಂಭವಾಗಿವೆ.
ಒಟ್ಟಾರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭಿಮನ್ಯು ರೀತಿ ಚಕ್ರವ್ಯೂಹ ಭೇದಿಸಲಾಗದೇ ಮಂಡ್ಯದಲ್ಲಿ ಸೋಲು ಅನುಭವಿಸಿದ್ದ ನಿಖಿಲ್, ಇದೀಗ ಮತ್ತೆ ಮಂಡ್ಯದ ಚುನಾವಣಾ ರಣರಂಗಕ್ಕೆ ಧುಮುಕುತ್ತಾರಾ ಎಂದು ಕಾದು ನೋಡಬೇಕಿದೆ.