ಹಾಸನ: ನೈಟ್ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆ ಸರ್ಕಾರದ ವಿರುದ್ಧ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ.
ಇಂದಿನಿಂದ ನೈಟ್ ಕರ್ಫ್ಯೂ ಎಂದು ಸರ್ಕಾರ ಫೋಷಿಸಿದ ಬೆನ್ನಲ್ಲೆ ಜನರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಅದರಲ್ಲಿಯೂ ಈಗಷ್ಟೇ ಸ್ವಲ್ಪ ಚೇತರಿಸಿಕೊಳ್ಳುತ್ತಿರುವ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಸರ್ಕಾರದ ಕ್ರಮಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ನೈಟ್ ಕರ್ಫ್ಯೂ ಹಿನ್ನೆಲೆ ಗ್ರಾಹಕರು ಹೋಂಸ್ಟೇ ಹಾಗೂ ರೆಸಾರ್ಟ್ನಲ್ಲಿ ಈಗಾಗಲೇ ಬುಕ್ಕಿಂಗ್ಗೆ ನೀಡಿದ್ದ ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಈ ಪರಿಣಾಮ ಅನಿವಾರ್ಯವಾಗಿ ಮಾಲೀಕರು ಹಣವನ್ನು ವಾಪಸ್ ನೀಡಬೇಕಾದ ಸ್ಥಿತಿಯಲ್ಲಿ ಇದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಡಿ.30ರಿಂದ ಕೇರಳದಲ್ಲಿ ನೈಟ್ ಕರ್ಫ್ಯೂ
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಲೀಕರು, ಸರ್ಕಾರ ನೈಟ್ ಕರ್ಫ್ಯೂ ತಂದಿದೆ. ಇದರಿಂದ ತುಂಬಾ ನೋವಾಗಿದೆ. ಎರಡು ವರ್ಷದಿಂದ ಬ್ಯುಸಿನೆಸ್ ಇಲ್ಲದೆ ನಲುಗಿ ಹೋಗಿದ್ದೇವೆ. ಈಗ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದಾರೆ. ಈಗಾಗಲೇ ನ್ಯೂ ಇಯರ್ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಅಡ್ವಾನ್ಸ್ ತೆಗೆದುಕೊಂಡು ಬುಕ್ಕಿಂಗ್ ಮಾಡಿಕೊಂಡಿದ್ದೇವೆ. ಈಗ ಏನು ಮಾಡುವುದು ಗೊತ್ತಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ಹಣ ವಾಪಾಸ್ ಕೇಳ್ತಿದ್ದಾರೆ. ಆ ಹಣವನ್ನು ಸೆಲೆಬ್ರೇಷನ್ ಸಿದ್ಧತೆಗೆ ಉಪಯೋಗಿಸಿಕೊಂಡಿದ್ದೇವೆ. ಲೋನ್ ಕಟ್ಟಬೇಕು, ಕೆಲಸಗಾರರಿಗೆ ಸಂಬಳ ಕೊಡಬೇಕು. ಸರ್ಕಾರದ ಮಾರ್ಗಸೂಚಿ ನಿಯಮ ಮೀರಿ ಏನೂ ಮಾಡಲು ಆಗಲ್ಲ. ಈ ಬ್ಯುಸಿನೆಸ್ ಬಿಟ್ಟು ಬೇರೆ ಮಾಡೋಣ ಅಂದರೆ, ಇದಕ್ಕೆ ಸಾಲ ಮಾಡಿ ಬಂಡವಾಳ ಹಾಕಿದ್ದೀವಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆರಮ್ ಸಂಸ್ಥೆಯ 2ನೇ ಲಸಿಕೆ ಕೋವೊವ್ಯಾಕ್ಸ್ ತುರ್ತು ಬಳಕೆಗೆ ಶಿಫಾರಸು