ಬೆಂಗಳೂರು: ಆಷಾಢ ಮಾಸ ನಿಮಗೆ ಮಾತ್ರ, ನಮಗೆ ಏನು ಇಲ್ಲ. ಈಗಲೇ ನಿಗಮ ಮಂಡಳಿ ನೇಮಕಾತಿ ಆಗಬೇಕು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದಾರೆ.
ಶಾಸಕರಿಗೆ ಸಬೂಬು ಹೇಳಲು ನಮ್ಮಿಂದ ಆಗುತ್ತಿಲ್ಲ. ಹೀಗಾಗಿ ಈ ಮೊದಲೇ ನಿರ್ಧರಿಸಿದಂತೆ ನಿಗಮ ಮಂಡಳಿಯ ಒಟ್ಟು 30 ಸ್ಥಾನಗಳಲ್ಲಿ ಕಾಂಗ್ರೆಸ್ಸಿಗೆ 20 ಹಾಗೂ ಜೆಡಿಎಸ್ಗೆ 10 ಸ್ಥಾನ ಹಂಚಿಕೆಯಾಗಬೇಕು. ನೇಮಕ ಪ್ರಕ್ರಿಯೆ ಈಗಲೇ ಆಗಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ನಿಗಮ ಮಂಡಳಿ ನೇಮಕದಿಂದ ಮುನಿಸಿಕೊಂಡಿರುವ ಕಾಂಗ್ರೆಸ್ ಶಾಸಕರನ್ನು ಸಮಾಧಾನ ಪಡಿಸಲು ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಹೀಗಾಗಿ ಆಷಾಢದಲ್ಲಿಯೇ ಕಾಂಗ್ರೆಸ್ ಶಾಸಕರಿಗೆ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ.
ಆಷಾಢ ಮುಗಿಯುವವರೆಗೆ ಯಾವುದೇ ನೇಮಕಾತಿ ಬೇಡ ಎಂದು ದೇವೇಗೌಡ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಹೇಳಿದ್ದರು. ಆದರೆ ಈಗ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದರಿಂದ ಸಮ್ಮಿಶ್ರ ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ.