ಚಿಕ್ಕಬಳ್ಳಾಪುರ: ಜಿಲ್ಲೆಯ ಹಾಲಿ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಮಂತ್ರಿ ಎನ್.ಎಚ್.ಶಿವಶಂಕರರೆಡ್ಡಿ ಅವರದ್ದು ಎನ್ನಲಾದ ಆಡಿಯೋವೊಂದು ಈಗ ಜಿಲ್ಲೆಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಸಕರ ಭಾಷೆ ಬಳಕೆಯ ರೀತಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.
ಗೌರಿಬಿದನೂರು ತಾಲೂಕಿನ ಮೇಳ್ಯ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ ಅವರಿಗೆ ಕರೆ ಮಾಡಿರುವ ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಸಂಘದ ನಿರ್ಣಯವೊಂದಕ್ಕೆ ಸಹಿ ಹಾಕುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ತನ್ನೊಂದಿಗೆ ಶಾಸಕರೇ ಮಾತಾಡುತ್ತಿದ್ದಾರೆಂದು ಅರಿಯದ ನರಸಿಂಹಮೂರ್ತಿ, ಅವರ ಮಾತಿಗೆ ಒಪ್ಪದೇ ತಿರುಗಿ ಬಿದ್ದಿದ್ದಾರೆ. ಕಾನೂನಿನಂತೆ ಸಭೆ ಸೇರಿ ಕೈಗೊಳ್ಳುವ ನಿರ್ಣಯಕ್ಕಷ್ಟೇ ತಾನು ಸಹಿ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಶಿವಶಂಕರರೆಡ್ಡಿ ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿ ಸಹಿ ಹಾಕುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ಬೊಮ್ಮಾಯಿ ಆರ್ಎಸ್ಎಸ್ನವರು ಅಲ್ಲ: ಸಿದ್ದರಾಮಯ್ಯ
ಯಾವುದಕ್ಕೆ ಸಹಿ?
ಇಡೀ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳಲ್ಲಿ ಇದೀಗ ಚಾಲ್ತಿಯಲ್ಲಿರುವ ವಿಷಯವೆಂದರೆ ಕೋಚಿಮುಲ್ ಇಬ್ಭಾಗದ ವಿಷಯ. ಇದೇ ವಿಷಯವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ರಾಜಕೀಯ ಅಜೆಂಡಾವನ್ನಾಗಿ ಮಾಡಿಕೊಂಡಿವೆ. ಸಂಘಗಳು ಸಾಮಾನ್ಯ ಸಭೆಯಲ್ಲಿ ಈ ಕುರಿತು, ತಮ್ಮ ಸಂಘವು ಕೋಚಿಮುಲ್ ವಿಭಜನೆಗೆ ವಿರೋಧ ವ್ಯಕ್ತಪಡಿಸಿ, ಹಾಲು ಉತ್ಪಾದಕ ಸಂಘವು ಉಳಿಯುವ ಬಗ್ಗೆ ಒಲವು ವ್ಯಕ್ತಪಡಿಸಿ ನಿರ್ಣಯ ಕೈಗೊಂಡಂತೆ ಸಹಿ ಹಾಕಲು ಶಾಸಕರು ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕಾರ್ಯದರ್ಶಿ ನರಸಿಂಹಮೂರ್ತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ಶಾಸಕ ಶಿವಶಂಕರರೆಡ್ಡಿ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಆಡಿಯೋ ಕಳವು!
ತನ್ನ ಸ್ನೇಹಿತರ ಬಳಿ ಮೊಬೈಲ್ ನೀಡಿದ್ದಾಗ ತನಗೆ ತಿಳಿಯದಂತೆ ನನ್ನ ಮೊಬೈಲ್ನಲ್ಲಿದ್ದ ಆಡಿಯೋವನ್ನು ಕಳುವು ಮಾಡಿದ್ದಾರೆ. ತನ್ನ ಹಾಗೂ ಶಾಸಕರ ಸಂಭಾಷಣೆಯ ಆಡಿಯೋವನ್ನು ತನಗಾಗದವರು ಯಾರೋ ಎಡಿಟ್ ಮಾಡಿ ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ನಡಾವಳಿಗೆ ಸಹಿ ಹಾಕುವಂತೆ ಸ್ವತಃ ಶಾಸಕರೇ ಒತ್ತಡ ಹೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋವನ್ನು ಎಡಿಟ್ ಮಾಡಿ ಹರಿ ಬಿಡಲಾಗಿದೆ ಎಂದು ನರಸಿಂಹಮೂರ್ತಿ ತಿಳಿಸಿದ್ದಾರೆ.
ತನಗೂ ಶಾಸಕರಿಗೂ 20 ವರ್ಷಗಳ ಪರಿಚಯವಿದ್ದು, ತಾನು ಇದುವರೆಗೂ ಸಂಘದ ಕಾರ್ಯಗಳಲ್ಲಿ ನಿಯಮಬದ್ಧವಾಗಿ ವಿಧೇಯನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಶಾಸಕರು ತನ್ನ ಆಡಿಯೋ ಸಂಭಾಷಣೆಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಟ್ವೀಟ್ ವಾರ್
ಈ ಕುರಿತು ಶಾಸಕರು ಇದುವರೆಗೆ ಯಾವುದೇ ಪ್ರತಿಕ್ರಿಯೆಗೆ ನೀಡುತ್ತಿಲ್ಲ. ಆದರೆ ಆಡಿಯೋ ಮಾತ್ರ ಸಖತ್ ವೈರಲ್ ಆಗಿ ಪರ ವಿರೋಧದ ಚರ್ಚೆಗೆ ಗ್ರಾಸವಾಗುತ್ತಿದೆ.