ಯಾದಗಿರಿ: ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಮತದಾನ ಮಹತ್ವದ ತಿಳಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಸಾಕಷ್ಟು ಜಾಗೃತಿ ಸಹ ಮೂಡಿಸುತ್ತಿದೆ. ಆದರೆ ಯಾದಗಿರಿಯಲ್ಲಿ ನವ ವಿವಾಹಿತರು ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿ ನಡೆಸಿದ್ದಾರೆ.
ಮದುವೆ ಸಮಾರಂಭದಲ್ಲಿ ಲೋಕಸಭಾ ಚುನಾವಣೆಯ ಮತದಾನದ, ಮಹತ್ವ ಸಾರುವ ಮೂಲಕ ವಿಭಿನ್ನವಾಗಿ ಮದುವೆ ಕಾರ್ಯಕ್ರಮವೊಂದು ಇಂದು ಜರುಗಿದೆ. ಜಿಲ್ಲೆಯ ಶಹಾಪುರ ತಾಲೂಕಿನ ನಾಲ್ವಡಗಿ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಗ್ರಾಮದ ಶಿವರಾಜ್ ಹಾಗೂ ವಿಜಯಲಕ್ಷ್ಮಿ ಅವರು ತಮ್ಮ ವಿವಾಹಕ್ಕೆ ಬಂದ ಅತಿಥಿಗಳಿಗೆ ಮತದಾನ ಮಾಡುವಂತೆ ಜಾಗೃತಿಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ.
ನವದಂಪತಿ ವೇದಿಕೆ ಮೇಲೆ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂಬ ಬರಹವಿರುವ ಫಲಕ ತೋರಿಸಿ, ನಾವು ಕಡ್ಡಾಯವಾಗಿ ಮತ ಹಾಕುತ್ತೇವೆ ಮತ್ತು ನೀವು ಕೂಡ ಮತ ಹಾಕಬೇಕೆಂದು ಅತಿಥಿಗಳ ಜೊತೆ ಪ್ರಮಾಣವಚನ ಸ್ವೀಕರಿಸಿದರು.
ಇದೇ ವೇಳೆ ದಂಪತಿಯ ಸಂಬಂಧಿಯೊಬ್ಬರು ಮಾತನಾಡಿ ಮತದಾರರು, ಹಣ ಹಾಗೂ ಹೆಂಡದ ಆಮಿಷಕ್ಕೆ ಬಲಿಯಾಗದೇ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮತದಾನದ ದಿನ ರಜೆ ಮೇಲೆ ಊರಿಗೆ ತೆರಳದೇ ಅಂದು ಮತದಾನ ಮಾಡಬೇಕೆಂದು ಮದುವೆಗೆ ಬಂದ ಅತಿಥಿಗಳಿಗೆ ಜಾಗೃತಿ ಸಂದೇಶ ನೀಡಿದರು.