ಕೋಲಾರ: ಇಂದು ಬೆಳ್ಳಂಬೆಳಗ್ಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಕಳ್ಳತನಾಗಿದೆ. ಮಂಗಳವಾರ ಬೆಳಗ್ಗೆ ಜನಿಸಿದ್ದ ಹೆಣ್ಣು ಮಗುವೊಂದನ್ನ ಆಸ್ಪತ್ರೆ ವಾರ್ಡ್ ನಿಂದ ಕಳ್ಳತನ ಮಾಡಿದ್ದಾರೆ ಅಥವಾ ಉದ್ದೇಶ ಪೂರ್ವಕವಾಗಿ ಕಿಡ್ನಾಪ್ ಮಾಡಿದ್ದಾರೆ ಅನ್ನೋ ಅನುಮಾನ ಇದೀಗ ಮೂಡಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ವಮ್ಮಸಂದ್ರ ಗ್ರಾಮದ ವೇಣುಕುಮಾರಿ ಹಾಗೂ ನಾರಾಯಣಸ್ವಾಮಿ ಎಂಬ ದಂಪತಿಗಳಿಗೆ ಜನಿಸಿದ್ದ ಹೆಣ್ಣು ಮಗು ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕಳ್ಳತನವಾಗಿದೆ. ತಾಯಿ ಪಕ್ಕದಲ್ಲೇ ಮಲಗಿದ್ದ ಮಗುವನ್ನು ಯಾರೋ ಅಪರಿಚಿತರು ಕಿಡ್ನಾಪ್ ಮಾಡಿದ್ದಾರೆ. ಎರಡು ಗಂಟೆವರೆಗೂ ಎಚ್ಚರವಾಗಿದ್ದ ತಾಯಿ ವೇಣುಕುಮಾರಿ ನಿದ್ದೆಗೆ ಜಾರಿದ ತಕ್ಷಣವೇ ಮಗುವನ್ನು ಅಲ್ಲಿಂದ ಕಳ್ಳತನ ಮಾಡಲಾಗಿದೆ.
ಕಳ್ಳತನವಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ತಂದೆ ನಾರಾಯಣಸ್ವಾಮಿ ಹಾಗೂ ಸಂಬಂಧಿಕರು ಮಗುವನ್ನು ಆಸ್ಪತ್ರೆ ಸುತ್ತಮುತ್ತ ಹಾಗೂ ಕೋಲಾರ ನಗರದಲ್ಲೂ ಸಹ ಹುಡುಕಾಟ ಮಾಡಿದ್ದಾರೆ. ಆದರೂ ಮಗುವಿನ ಸುಳಿವು ಮಾತ್ರ ಸಿಕ್ಕಿಲ್ಲ. ಕೋಲಾರ ಜಿಲ್ಲಾಸ್ಪತ್ರೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಜೊತೆಗೆ ಸೆಕ್ಯೂರಿಟಿ ವ್ಯವಸ್ಥೆ ಕೂಡಾ ಇದೆ ಹೀಗಿದ್ರು ಮಗು ಕಳ್ಳತನವಾಗಿರುವ ಬಗ್ಗೆ ಮಗುವಿನ ಪೋಷಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಫೆಬ್ರವರಿ-24 ರಂದು ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶು ಕಿಡ್ನಾಪ್ ಆಗಿತ್ತು. ಆದ್ರೆ ಇದುವರೆಗೂ ಮಗುವಿನ ಸುಳಿವು ಸಿಕ್ಕಿಲ್ಲ. ಇತ್ತೀಚೆಗೆ ಹೈದರಾಬಾದ್ನ ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ಮಗು ಬೀದರ್ ನಲ್ಲಿ ಪತ್ತೆಯಾಗಿತ್ತು.