ನವದೆಹಲಿ: ಅನರ್ಹ ಶಾಸಕರಿಗೆ ಇಂದು ದೆಹಲಿಯಲ್ಲಿ ಬಿಗ್ ಡೇ ಆಗಿದೆ. ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಅನರ್ಹ ಶಾಸಕರು ಮುಂದಾಗಿದ್ದಾರೆ.
ಹೌದು. ಸುಪ್ರೀಂಕೋರ್ಟಿನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ವಿಳಂಬ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಲಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
ಮೊನ್ನೆ ರಾತ್ರಿಯಿಂದ ದೆಹಲಿಯಲ್ಲೇ ಬೀಡುಬಿಟ್ಟ ಅನರ್ಹ ಶಾಸಕರು, ಅಮಿತ್ ಶಾ ಭೇಟಿಯಾಗದೇ ವಾಪಸ್ ತೆರಳದಿರಲು ನಿರ್ಧರಿಸಿದ್ದಾರೆ. ಅಮಿತ್ ಶಾ ಜೊತೆ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ನಡೆಸದೇ ವಾಪಸ್ಸಾಗಲ್ಲ ಎಂದು ಅನರ್ಹರು ಪಟ್ಟು ಹಿಡಿದಿದ್ದಾರೆ.
ವಕೀಲರ ಭೇಟಿ ಹೆಸರಿನಲ್ಲಿ ಸಿ.ಪಿ ಯೋಗೇಶ್ವರ್ ನೇತೃತ್ವದಲ್ಲಿ ದೆಹಲಿಯ ಖಾಸಗಿ ಹೋಟೆಲಿನಲ್ಲಿಯೇ ಅನರ್ಹರು ಉಳಿದುಕೊಂಡಿದ್ದಾರೆ. ಇತ್ತ ಅನರ್ಹ ಶಾಸಕರ ಆಗಮನದ ಬೆನ್ನಲ್ಲೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ಆಗಮಿಸಿದ್ದು, ಅಮಿತ್ ಶಾ ಭೇಟಿ ಮಾಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ.
ಬಿಎಸ್ವೈ ಅವರಿಗೆ ಸಚಿವ ಅಶ್ವತ್ಥ್ ನಾರಾಯಣ್ ಸಾಥ್ ನೀಡಲಿದ್ದಾರೆ. ಆದರೆ ಸರ್ಕಾರಿ ಸಭೆ ಹಿನ್ನೆಲೆಯಲ್ಲಿ ಸದ್ಯ ಗೋವಾದಲ್ಲಿರುವ ಅಮಿತ್ ಶಾ ಅವರನ್ನು ಅತೃಪ್ತರು ಸಂಜೆ ಬಳಿಕ ಭೇಟಿಯಾಗುವ ಪ್ಲಾನ್ ಮಾಡಿಕೊಂಡಿದ್ದಾರೆ. ಭೇಟಿ ವೇಳೆ ಅನರ್ಹರು, ಸುಪ್ರೀಂಕೋರ್ಟ್ ವಿಚಾರಣೆ, ಸಚಿವ ಸ್ಥಾನ ಹಾಗೂ ಪ್ರಮುಖ ಖಾತೆಗಳ ಭರವಸೆ ಪಡೆಯಲಿದ್ದಾರೆ.