ಹಾವೇರಿ: ಇಲ್ಲಿನ (Haveri) ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನವಜಾತ ಶಿಶುವೊಂದು ಬಲಿಯಾಗಿದೆ. ಹೆರಿಗೆಗೆ ಬಂದ ಮಹಿಳೆಯನ್ನು 1 ಒಂದು ತಾಸು ನೆಲದ ಮೇಲೆ ಕೂರಿಸಿ ನಿರ್ಲಕ್ಷ್ಯ ತೋರಿದ್ದಾರೆ.
ಸೂಕ್ತ ಚಿಕಿತ್ಸೆ ನೀಡದೀರೋದ್ರಿಂದ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಾಣೆಬೆನ್ನೂರು ತಾಲೂಕು ಕಾಕೋಳ ಗ್ರಾಮದ ರೂಪಾ (30) ಇಂದು ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಗೆ ಕರೆ ತರಲಾಗಿತ್ತು. ಹೆರಿಗೆ ನೋವಿನಿಂದ ಒದ್ದಾಡ್ತಿದ್ದ ಗರ್ಭಿಣಿ ರೂಪಾಗೆ ಬೆಡ್ ಕೂಡ ನೀಡದೆ ನೆಲದ ಮೇಲೆ ಕೂರಿಸಿದ್ರು ಎಂದು ಆರೋಪಿಸಿದ್ದಾರೆ. ಸೂಕ್ತ ಚಿಕಿತ್ಸೆ ಕೊಡದೇ ವೈದ್ಯರು, ನರ್ಸ್ಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ಶೌಚಾಲಯಕ್ಕೆಂದು ಮಹಿಳೆ ಹೋಗುವಾಗ ಮಾರ್ಗದಲ್ಲೇ ಹೆರಿಗೆಯಾಗಿ, ಮಗುವಿಗೆ ಪೆಟ್ಟಾಗಿ ಮೃತಪಟ್ಟಿದೆ. ನಮಗಾದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯ ಕುಟುಂಬಸ್ಥರ ಆರೋಪವನ್ನು ಜಿಲ್ಲಾಸ್ಪತ್ರೆಯ ವೈದ್ಯ ಡಾ. ಪಿ.ಆರ್ ಹಾವನೂರ ತಳ್ಳಿಹಾಕಿದ್ದಾರೆ. ನಮ್ಮ ವೈದ್ಯರು ತಪಾಸಣೆ ನಡೆಸಿದಾಗ ನಿನ್ನೆಯಿಂದ ಮಗುವಿನ ಮೂಮೆಂಟ್ ಇಲ್ಲ ಎಂದು ಮಹಿಳೆ ಹೇಳಿದ್ದಾರೆ. ಹೊಟ್ಟೆಯಲ್ಲಿ ಮಗು ಮೃತಪಟ್ಟಿತ್ತು ಎಂದಿದ್ದಾರೆ.

