-ಯುವಕ, ಯುವತಿಯರ ಅಸಭ್ಯ ವರ್ತನೆ ತಡೆಯಲು
ಮಂಡ್ಯ: ಹೊಸ ವರ್ಷದ ಸಂಭ್ರಮಾಚರಣೆಯನ್ನು ಕಾವೇರಿ ನದಿ ತೀರದಲ್ಲಿ ಫುಲ್ ಮೋಜು ಮಸ್ತಿ ಮೂಲಕ ಎಂಜಾಯ್ ಮಾಡಬೇಕು ಅಂದುಕೊಂಡಿದ್ದ ಜನರಿಗೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಶಾಕ್ ನೀಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರದ ಪ್ರವಾಸಿ ಸ್ಥಳ ಸೇರಿದಂತೆ ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಮಂಡ್ಯ ಎಸ್ಪಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಡಿಸಂಬರ್ 31 ಮತ್ತು ಜನವರಿ 01ಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿ ತೀರದಲ್ಲಿ ಬರುವ ಪ್ರವಾಸಿ ಸ್ಥಳಗಳು, ಮಳವಳ್ಳಿ ತಾಲೂಕಿನ ಪ್ರವಾಸಿ ಸ್ಥಳಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣದ ಬಲಮುರಿ, ಎಡಮುರಿ, ಸಂಗಮ, ಕರಿಘಟ್ಟ ಸೇರಿದಂತೆ ಇನ್ನಿತರ ಕಾವೇರಿ ಜಲಾನಯನ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡುವ ಮೂಲಕ ಹೊಸ ವರ್ಷದ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ. ಇದಲ್ಲದೇ ಮಳವಳ್ಳಿ ತಾಲೂಕಿನ ಮುತ್ತತ್ತಿಗೂ ಸಹ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪ್ರಮುಖವಾಗಿ ಕಾವೇರಿ ತೀರದಲ್ಲಿ ನಿಷೇಧಾಜ್ಞೆ:
ಮಂಡ್ಯ ಜಿಲ್ಲೆ ಎಂದರೆ ಕಾವೇರಿ ನದಿ ತೀರದ ಜಿಲ್ಲೆ ಎಂದು ರಾಜ್ಯದಲ್ಲಿ ಹೆಸರುವಾಸಿ ಪಡೆದಿದೆ. ಕಾವೇರಿ ತೀರದಲ್ಲಿ ಹಲವು ರಮಣೀಯವಾದ ಪ್ರವಾಸಿ ಸ್ಥಳಗಳು ಇವೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಈ ಭಾಗಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅದರಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಅಪಾರ ಜನರು ಬಂದು ಮೋಜು ಮಸ್ತಿ ಮಾಡುತ್ತಾರೆ. ಇಲ್ಲೆ ಮಂಸಾಹಾರವನ್ನು ತಯಾರು ಮಾಡಿಕೊಂಡು ಮದ್ಯಪಾನ ಸೇವನೆ ಮಾಡಿಕೊಂಡು ಫುಲ್ ಎಂಜಾಯ್ ಮಾಡ್ತಾರೆ. ಈ ವೇಳೆ ಈ ಭಾಗದಲ್ಲಿ ಸಾಕಷ್ಟು ಅವಘಡಗಳು ಸಹ ಜರುಗಿವೆ. ಅಲ್ಲದೆ ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತದೆ. 2013 ರಿಂದ 2019ನೇ ಸಾಲಿನ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸುಮಾರು 55 ಮಂದಿ ಇಲ್ಲಿ ಸಾವನ್ನಪ್ಪಿದ್ದಾರೆ. ಈ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಎಸ್ಪಿ ಪರಶುರಾಮ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಅಸಭ್ಯ ವರ್ತನೆ ತಡೆಯುವ ಉದ್ದೇಶ:
ಇತ್ತೀಚಿಗೆ ದೇಶದ ಹಲವು ಭಾಗದಲ್ಲಿ ಸಾರ್ವಜನಿಕ ಸ್ಥಳಗಳಲ್ಲೇ ಯುವಕ ಯುವತಿಯರು ಅಸಭ್ಯವಾಗಿ ವರ್ತನೆ ಮಾಡುವಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಅದೇ ರೀತಿ ಕಾವೇರಿ ನದಿ ತೀರದ ಪ್ರದೇಶಗಳಲ್ಲೂ ಸಹ ಯುವಕ ಯುವತಿಯರು ಅಸಭ್ಯವಾಗಿ ವರ್ತನೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಒಂದು ಘಟನೆಗಳನ್ನು ತಡೆಯುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ.
ಪೇಜಾವರ ಶ್ರೀಗಳ ಶೋಕಾಚರಣೆ:
ರಾಜ್ಯದಲ್ಲಿ ಮೂರು ದಿನಗಳ ಕಾಲ ಪೇಜಾವರ ಶ್ರೀಗಳ ನಿಧನ ಹಿನ್ನೆಲೆ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಾದ್ಯಾಂತ ಹೊಸ ವರ್ಷ ಸಂಭ್ರಮಾಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡುವಂತಿಲ್ಲ. ಅತೀ ಹೆಚ್ಚು ಸೌಂಡ್ ಕೊಟ್ಟುಕೊಂಡು ಧ್ವನಿ ವರ್ಧಕಗಳನ್ನು ಸಹ ಬಳಸಿಕೊಳ್ಳುವ ಹಾಗೆ ಇಲ್ಲ. ಸರಳವಾಗಿ ಸಂಭ್ರಮಾಚರಣೆ ಆಚರಣೆ ಮಾಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಹೇಳಿದ್ದಾರೆ.