ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಭಾಗದಲ್ಲಿ ಅನೇಕ ಜೀವಸಂಕುಲಗಳು ಆಶ್ರಯ ಪಡೆದಿವೆ. ಹೊಸ ಪ್ರಭೇದ ಸಿಹಿನೀರಿನ ಏಡಿ ಪತ್ತೆಯಾಗಿದೆ.
ಕಾರವಾರದ ದೇವಳಮಕ್ಕಿಯಲ್ಲಿ “ಘಾಟಿಯಾನದೃತಿಆರ್ಮ್ಸ್” ಎಂಬ ಅವರೂಪದ ಏಡಿಯನ್ನು ಕಾರವಾರ ವಿಭಾಗದ ಕಾರವಾರ ವಲಯದ ಗಸ್ತು ವನಪಾಲಕರಾದ ಗೋಪಾಲನಾಯ್ಕ ಹಾಗೂ ಸುನೀಲ್ ರಾಮಗೌಡ ಅವರು ಪತ್ತೆ ಹಚ್ಚಿದ್ದಾರೆ. 2023 ರಲ್ಲಿ ಯಲ್ಲಾಪುರ ಭಾಗದಲ್ಲಿ `ಆರಾಧ್ಯ ಪ್ಲಾಸಿಡಾ’ ಎಂಬ ಸಿಹಿನೀರಿನ ವಿಶಿಷ್ಟ ಏಡಿ ಪತ್ತೆಯಾಗಿತ್ತು. ಪಶ್ಚಿಮ ಘಟ್ಟ ವ್ಯಾಪ್ತಿಯ ಬಾರೆ, ಕಳಚೆ, ಅಣಶಿ, ಕದ್ರಾ ಪ್ರದೇಶಗಳಲ್ಲಿರುವ ಸಿಹಿ ನೀರಿನ ಏಡಿ ಇದಾಗಿದ್ದು, ಸೌಮ್ಯ ಸ್ವಭಾವದ ಹಾಗೂ ನಿಶಬ್ಧವಾಗಿ ಇರುವ ಏಡಿ ಇದಾಗಿತ್ತು. ಆದರೆ, ಇದೀಗ ಪತ್ತೆಯಾಗಿರುವ ಏಡಿ ಬಲು ವಿಶಿಷ್ಟವಾಗಿದೆ. ಮಧ್ಯ ಪಶ್ಚಿಮ ಘಟ್ಟದಲ್ಲಿ ಮಾತ್ರ ಸಿಗುವ ಏಡಿ ಇದಾಗಿದೆ. ಇದನ್ನೂ ಓದಿ: ಬಳ್ಳಾರಿ, ಹೊಸಪೇಟೆ ನಡುವೆ ರೈಲ್ವೆ ಮಲ್ಟಿಟ್ರ್ಯಾಕ್ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಏನಿದರ ವಿಶೇಷ?
ಬಹುತೇಕ ಏಡಿಗಳು ಒಂದು ಅಥವಾ ಎರಡು ಬಣ್ಣಗಳಲ್ಲಿ ತನ್ನ ಜೀವಿತ ಅವಧಿಯನ್ನು ಕಳೆಯುತ್ತವೆ. ಆದರೆ, ಈ ಏಡಿ ಮೂರು ಬಣ್ಣದಲ್ಲಿ ತನ್ನ ಜೀವಿತಾವಧಿಯಲ್ಲಿ ಕಾಣಸಿಗುತ್ತದೆ. ಮರಿ ಇರುವಾಗ ಕಪ್ಪು ಮಿಶ್ರಿತ ನೇರಲೆ, ಮಧ್ಯ ವಯಸ್ಸಿಗೆ ಬಂದಾಗ ಹಳದಿ ಮಿಶ್ರಿತ ಬಿಳಿ, ಕಪ್ಪು ಮಿಶ್ರಿತ ಬಿಳಿ ಇದ್ದು, ಕಾಲುಗಳು ಕೇಸರಿ ಕಲರ್ ಇರುತ್ತದೆ. ಜೀವನದ ಕೊನೆಯ ಭಾಗದಲ್ಲಿ ಹಳದಿ ಮಿಶ್ರಿತ ಶ್ವೇತ ವರ್ಣದಲ್ಲಿ ಕಾಣುತ್ತದೆ. ಕಾಲಿನ ಉಗುರು ಮಾತ್ರ ಕೇಸರಿ ಬಣ್ಣದಲ್ಲಿ ಕಾಣಸಿಗುತ್ತವೆ.
ಅತೀ ಹೆಚ್ಚಿನ ಮಳೆ ಬೀಳುವ ಪ್ರದೇಶದಲ್ಲಿ ಕಾಣಸಿಗುವ ಇವು ಸಮುದ್ರಮಟ್ಟದಿಂದ 500 ಮೀಟರ್ ಎತ್ತರದಲ್ಲಿ ಕೆಂಪು ಕಲ್ಲುಗಳಲ್ಲಿ (ಮಣ್ಣಿನ ಕೆಂಪು ಚೀರೇಕಲ್ಲು) ಇರುವ ಹೋಲುಗಳಲ್ಲಿ ಕಾಲೋನಿ ರೀತಿ ಗುಂಪಾಗಿ ವಾಸವಾಗಿರುತ್ತದೆ. ಇದಲ್ಲದೆ, ನೀರು ತುಂಬಿದ ಸಣ್ಣ ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ಆಗಸ್ಟ್ ತಿಂಗಳಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತದೆ. ಒಂದೂವರೆ ಇಂಚು ಉದ್ದ ಮಾತ್ರ ಬೆಳೆಯುವ ಇವು ಅತ್ಯಂತ ಚಿಕ್ಕ ಏಡಿ ಪ್ರಭೇದಕ್ಕೆ ಸೇರಿವೆ.
ಪರಿಸರಕ್ಕೆ ಕೊಡುಗೆ ಏನು?
ಈ ಏಡಿಗಳು ಪರಿಸರಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಇವುಗಳ ಬಗ್ಗೆ ಹಲವು ವರ್ಷದಿಂದ ಅಧ್ಯಯನ ನಡೆಸುತ್ತಿರುವ ವನಪಾಲಕ ಗೋಪಾಲನಾಯ್ಕ ಅವರು ಹೇಳುವಂತೆ ಇವು ಎಲ್ಲಿ ವಾಸವಾಗಿರುತ್ತದೆಯೋ ಅಲ್ಲಿ ಸಂವೃದ್ಧ ಅರಣ್ಯ ಪರಿಸರವಿದೆ ಎಂದರ್ಥ. ಇವುಗಳು ಕೆಂಪು ಕಲ್ಲುಬಂಡೆಗಳನ್ನು ಕೊರೆದು ಗುಂಪಾಗಿ ವಾಸಮಾಡುತ್ತವೆ. ಇದಲ್ಲದೆ, ಮರಗಳ ಪೊಟರೆಗಳಲ್ಲಿ ನೀರು ಇರುವ ಭಾಗದಲ್ಲಿ ಇರುತ್ತವೆ. ಹೀಗಾಗಿ, ಇವು ಅಂತರ್ಜಲ ಹೆಚ್ಚಿಸುವಲ್ಲಿ ಸಹ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಗಿಡಮರಗಳು ವೃದ್ಧಿಯಾಗಲು ಪರಿಸರಕ್ಕೆ ಪೂರಕವಾಗಿದೆ ಎನ್ನುತ್ತಾರೆ. ಕೀಟನಾಶಗಳಾಗಿದ್ದರಿಂದ ಇವುಗಳು ವೃದ್ಧಿಯಾಗುವ ಸಸ್ಯಗಳಿಗೆ ಪೌಷ್ಟಿಕಾಂಶವನ್ನು ಒದಗಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳ ಸಂಭ್ರಮ – ಹಾವೇರಿ ಸಮಾವೇಶದಲ್ಲಿ ಸಿಎಂ ಪುತ್ಥಳಿ ಅನಾವರಣ
ಕಾರವಾರದಲ್ಲಿ ಹಾವುಗಳ ರಕ್ಷಣೆಯಲ್ಲಿ ತೊಡಗಿರುವ ಗೋಪಾಲ್ ನಾಯ್ಕ ಅವರು ಹಿರಿಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ SciELO ಬ್ರಸಿಲ್ನಲ್ಲಿ ಫೆ.9 ರಂದು ಹೊಸ ಪ್ರಬೇಧದ ಏಡಿಯ ಬಗ್ಗೆ ತನ್ನ ಅಧ್ಯಯನ ವರದಿಯನ್ನು ನೀಡಿದ್ದು, ಇದನ್ನು ಮಾನ್ಯ ಮಾಡಿ ಪ್ರಕಟಿಸಿದೆ. ತಾವು ಗುರುತಿಸಿದ ಈ ಏಡಿಗೆ ತಮ್ಮ ಮಗಳು ದೃತಿ ಅವರ ಹೆಸರನ್ನು ಸೇರಿಸಿ “ಘಾಟಿಯಾನದೃತಿಆರ್ಮ್ಸ್” ಎಂದು ಹೆಸರಿಟ್ಟಿದ್ದು, ಇದರ ಜೀವನ ಹಾಗೂ ಇತರೆ ಮಾಹಿತಿಯ ಬಗ್ಗೆ ಅಧ್ಯಯನ ಮುಂದುವರೆಸಿದ್ದಾರೆ.

