ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪವನ್ನು ಅನಾವರಣಗೊಳಿಸಿದ್ದಾರೆ. ಈ ಶಿಲ್ಪ ಅನಾವರಣಗೊಳ್ಳುತ್ತಿದ್ದಂತೆಯೇ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಲಾಂಛನವು ಸೌಮ್ಯ ರೂಪದಲ್ಲಿತ್ತು. ಇದೀಗ ಮೋದಿ ಅನಾವರಣಗೊಳಿಸಿರುವ ಶಿಲ್ಪವು ಉಗ್ರರೂಪದಲ್ಲಿದೆ ಎಂದು ಟೀಕಿಸಲಾಗುತ್ತಿದೆ. ಮೋದಿ ವಿರೋಧಿಗಳೆಲ್ಲ ರಾಷ್ಟ್ರ ಲಾಂಛನ ವಿರೂಪಗೊಳಿಸಲಾಗಿದೆ ಎಂದರೆ, ಮೋದಿ ಪರವಾಗಿದ್ದವರು ಸರಿಯಾಗಿದೆ ಎಂದು ಬೆಂಬಲಿಸುತ್ತಿದ್ದಾರೆ.
ಈ ಕುರಿತಂತೆ ನಟ ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಅಡಿ ಪ್ರಶ್ನೆ ಮಾಡಿದ್ದು, ‘ನಾವು ಎತ್ತ ಸಾಗುತ್ತಿದ್ದೇವೆ’ ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯ ಜೊತೆಗೆ ಬದಲಾವಣೆಯಾದ ರಾಮನ, ಹನುಮಂತನ ಫೋಟೋಗಳನ್ನು ಹಾಕಿದ್ದಾರೆ. ಪ್ರಕಾಶ್ ರೈ ಟ್ವಿಟ್ ಮಾಡುತ್ತಿದ್ದಂತೆಯೇ ಮೋದಿ ಪರವಾಗಿದ್ದವರು ಪ್ರಕಾಶ್ ರೈ ಅವರನ್ನು ತರಾಟೆಗೆ ತಗೆದುಕೊಂಡಿದ್ದರೆ, ಪ್ರಕಾಶ್ ರೈ ಪರವಾಗಿದ್ದವರು ರಾಷ್ಟ್ರೀಯ ಲಾಂಛನಕ್ಕೆ ಅವಮಾನ ಮಾಡಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್
ಇತ್ತ ಬಾಲಿವುಡ್ ನಟ ಅನುಪಮ್ ಖೇರ್, ಹೊಸ ಶಿಲ್ಪವನ್ನು ತಯಾರಿಸಿದವರ ಪರವಾಗಿ ಮಾತನಾಡಿದ್ದು, ಸಿಂಹಕ್ಕೆ ಹಲ್ಲುಗಳಿರುವುದರಿಂದಲೇ ಅದರ ಪ್ರದರ್ಶನ ಸಹಜ ಎಂದು ವ್ಯಂಗ್ಯವಾಡಿದ್ದಾರೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದೂ, ಘರ್ಜಿಸಿದ ಸಿಂಹಗಳು ನಮಗಿಂದು ಬೇಕಾಗಿವೆ ಎಂದು ಹೇಳಿದ್ದಾರೆ. ಒಂದು ವಾರದಿಂದ ಈ ಚರ್ಚೆ ನಡೆಯುತ್ತಿದ್ದು, ಇದೀಗ ಸಿನಿಮಾ ರಂಗಕೂಡ ಅದರಲ್ಲಿ ಭಾಗಿಯಾಗಿದೆ.