ಬೆಂಗಳೂರು: ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಸಿನಿಮಾಗಳ ಬಗ್ಗೆ ಯಾವತ್ತಿದ್ದರೂ ಕನ್ನಡದ ಪ್ರೇಕ್ಷಕರಲ್ಲೊಂದು ಮೋಹವಿದ್ದೇ ಇದೆ. ಅದರಲ್ಲಿಯೂ ಹೊಸ ತಂಡ, ಹೊಸ ಥರದ ಕಥೆಯೊಂದಿಗೆ ಆಗಮಿಸಿದೆಯೆಂದರೆ ಅದರತ್ತ ತೀವ್ರವಾದ ಕುತೂಹಲ ಇದ್ದೇ ಇರುತ್ತದೆ. ಹೀಗೆಯೇ ಆಗಮಿಸಿರುವ ಹೊಸಬರ ತಂಡವೊಂದು ಮನರೂಪ ಎಂಬ ಚಿತ್ರವನ್ನು ರೂಪಿಸಿದೆ. ಚಿತ್ರೀಕರಣವೆಲ್ಲ ಮುಗಿಸಿಕೊಂಡು ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ ಮಜವಾದ ಕಥಾ ಹಂದರದ ಸುಳಿವು ಬಿಟ್ಟು ಕೊಡುತ್ತಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನೂ ಪಡೆದುಕೊಳ್ಳುತ್ತಿದೆ.
ಇದು ಕಿರಣ್ ಹೆಗ್ಡೆ ನಿರ್ದೇಶನದ ಚಿತ್ರ. ಅವರೇ ಸಿಎಂಸಿಆರ್ ಮೂವೀಸ್ ಬ್ಯಾನರ್ ಮೂಲಕ ಈ ಚಿತ್ರದ ನಿರ್ಮಾಣದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಇದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವಂಥಾ ಚಿತ್ರ. ಆದರೆ ಇದು ಈ ಜಾನರಿನ ಮಾಮೂಲಿ ಚಿತ್ರಗಳಂತಿಲ್ಲ ಎಂಬ ವಿಚಾರ ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಮೂಲಕವೇ ಸಾಬೀತಾಗಿದೆ. ಕಾಡೊಳಗೆ ಟ್ರಿಪ್ಪು ಹೊರಡೋ ಐವರು ಸ್ನೇಹಿತರ ಟೀಮು ಕರಡಿ ಗುಹೆ ಪ್ರದೇಶದಲ್ಲಿ ಎದುರಿಸೋ ಸನ್ನಿವೇಶಗಳನ್ನು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿ ಮನರೂಪ ಮೂಲಕ ಕಟ್ಟಿ ಕೊಡಲಾಗಿದೆ.
ಈ ಚಿತ್ರವನ್ನು ಹೊಸಬರೇ ಸೇರಿ ರೂಪಿಸಿದ್ದಾರೆ. ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರೂ ಇಲ್ಲಿ ನಟಿಸಿದ್ದಾರೆ.
ಇದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಅಂದಾಕ್ಷಣ ಅದೊಂದು ಚೌಕಟ್ಟಿಗೆ ಮಾತ್ರವೇ ಸೀಮಿತವಾಗಿದೆ ಅಂದುಕೊಳ್ಳಬೇಕಿಲ್ಲ. ಇಲ್ಲಿ ಈ ಪೀಳಿಗೆಯ ಯವ ಸಮೂಹದ ಮನೋಭೂಮಿಕೆಯನ್ನು ಅಚ್ಚರಿದಾಯಕವಾಗಿ ಬಿಚ್ಚಿಡುವ ಪ್ರಯೋಗವೂ ನಡೆದಿದೆ. 1980ರಿಂದ 2000ದವರೆಗಿನ ಯುವ ಸಮೂಹದ ರೋಚಕ ಕಥೆಯೂ ಇಲ್ಲಿದೆಯಂತೆ. ಈಗ ಮೋಷನ್ ಪೋಸ್ಟರ್ ಮೂಲಕ ಹವಾ ಎಬ್ಬಿಸಿರೋ ಚಿತ್ರತಂಡ ವಾರದೊಪ್ಪತ್ತಿನಲ್ಲಿಯೇ ಟೀಸರ್ ಅನಾವರಣ ಮಾಡಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರಿನಲ್ಲಿ ಮನರೂಪ ತೆರೆ ಕಾಣಲಿದೆ.