ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ಆರೋಪಿ ಕಪಿಲ್ ಗುಜ್ಜರ್ ಆಮ್ ಅದ್ಮಿ ಕಾರ್ಯಕರ್ತ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.
ಕಪಿಲ್ ಗುಜ್ಜರ್ ಬಂಧಿಸಿದ ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದ್ದು ಈ ವೇಳೆ ಆಮ್ ಅದ್ಮಿ ಸೇರ್ಪಡೆಗೊಂಡಿದ್ದ ಫೋಟೋಗಳು ದೊರಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ನಲ್ಲಿ ವಾಟ್ಸಪ್ ಸಂದೇಶಗಳನ್ನು ಪರಿಶೀಲನೆ ನಡೆಸಲಾಯಿತು. ಎಲ್ಲ ಸಂದೇಶಗಳನ್ನು ಡಿಲಿಟ್ ಮಾಡಲಾಗಿತ್ತು. ತಂತ್ರಜ್ಞಾನ ಸಹಾಯದಿಂದ ಎಲ್ಲ ಮಾಹಿತಿಯನ್ನು ಮರಳಿ ಪಡೆಯಲಾಗಿದ್ದು, ಈ ವೇಳೆ ಆಮ್ ಅದ್ಮಿ ಸೇರ್ಪಡೆಗೊಂಡಿರುವ ಫೋಟೋಗಳು ಪತ್ತೆಯಾಗಿದೆ. ಈ ಫೋಟೋಗಳು ಒಂದು ವರ್ಷ ಹಳೆಯದು ಎನ್ನಲಾಗಿದ್ದು ಆಪ್ ನಾಯಕಿ ಅತಿಶಿ ಮತ್ತು ಸಂಜಯ್ ಸಿಂಗ್ ಜೊತೆಗೆ ಆರೋಪಿ ಕಪಿಲ್ ಗುಜ್ಜರ್ ಗುರುತಿಸಿಕೊಂಡಿದ್ದಾನೆ. ತಂದೆಯೂ ಸೇರಿ ಹಲವರೊಂದಿಗೆ ಕಪಿಲ್ ಆಮ್ ಅದ್ಮಿ ಸೇರ್ಪಡೆಗೊಂಡಿದ್ದರು ಎಂದು ಕ್ರೈಂ ಬ್ರ್ಯಾಂಚ್ ಡಿಸಿಪಿ ರಾಜೇಶ್ ಡಿಯೊ ಪ್ರತಿಕ್ರಿಯಿಸಿದ್ದಾರೆ.
ಫೆಬ್ರವರಿ ಒಂದರಂದು ದಕ್ಷಿಣ ದೆಹಲಿ ಪ್ರದೇಶದ ಶಾಹೀನ್ ಬಾಗ್ ನಲ್ಲಿ ಮಹಿಳೆಯರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಕಪಿಲ್ ಗುಜ್ಜರ್, ‘ನಮ್ಮ ದೇಶದಲ್ಲಿ ಹಿಂದುಗಳದಷ್ಟೇ ನಡೆಯೋದು, ಬೇರೆ ಯಾರದ್ದು ಅಲ್ಲ’ ಎನ್ನುತ್ತಾ ಎರಡು ಮೂರು ಬಾರಿ ಗುಂಡು ಹಾರಿಸಿದ್ದ. ತಕ್ಷಣವೇ ವಶಕ್ಕೆ ಪಡೆದಿದ್ದ ಪೊಲೀಸರು ತನಿಖೆ ನಡೆಸಿದ್ದರು ಪ್ರಾಥಮಿಕ ತನಿಖೆಯಲ್ಲಿ ಬಂಧಿತ ವ್ಯಕ್ತಿ ನೋಯ್ಡಾ ಬಾರ್ಡರ್ ನಲ್ಲಿರುವ ದಲ್ಲಾಪುರ ಗ್ರಾಮಾದ ನಿವಾಸಿ ಎಂದು ತಿಳಿದು ಬಂದಿತ್ತು.