ನವದೆಹಲಿ: ಫೆಬ್ರವರಿ 8 ರಂದು ದೆಹಲಿ ವಿಧಾನಸಭೆಗೆ ಮತದಾನ ಹಿನ್ನೆಲೆ ಇಂದು ರಾಜ್ಯ ಬಿಜೆಪಿ ನಾಯಕರು ಪ್ರಚಾರ ನಡೆಸಿದರು. ಆರ್.ಕೆ ಪುರಂ ನಲ್ಲಿರುವ ಕನ್ನಡಿಗರ ನಿವಾಸಗಳಿಗೆ ತೆರಳಿದ ಬಿಜೆಪಿ ನಾಯಕರು ಬಿಜೆಪಿ ಬೆಂಬಲಿಸಿ ಮತ ನೀಡುವಂತೆ ಮನವಿ ಮಾಡಿದರು.
ಡಾ.ವೆಂಕಟೇಶ ಮೌರ್ಯ ನೇತೃತ್ವದಲ್ಲಿ ಸಂಸದೆ ಶೋಭ ಕರಾಂದ್ಲಾಜೆ, ನಟಿ ತಾರಾ ಸೇರಿ ರಾಜ್ಯದಿಂದ ಆಗಮಿಸಿದ್ದ ಹಲವು ಬಿಜೆಪಿ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಕನ್ನಡಿಗರು ವಾಸಿಸುವ ಆರ್ ಕೆ.ಪುರಂ ನಲ್ಲಿ ಮನೆ ಮನೆ ಪ್ರಚಾರ ನಡೆಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತದಲ್ಲಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು ದೆಹಲಿಯಲ್ಲೂ ಬಿಜೆಪಿಯನ್ನು ಕನ್ನಡಿಗರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಸಾಕಷ್ಟು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಅದ್ಮಿ ಸರ್ಕಾರದ ಆಡಳಿತ ನೋಡಿದ್ದಿರಿ. ನೀಡಿದ ಯಾವ ಭರವಸೆಗಳನ್ನು ಆ ಸರ್ಕಾರಗಳು ಈಡೇರಿಸಿಲ್ಲ. ಹೀಗಾಗಿ ಒಮ್ಮೆ ಬಿಜೆಪಿ ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದು ಮತಬೇಟೆ ಮಾಡಿದರು.